ಬಿಜೆಪಿ ಶಾಸಕರಲ್ಲಿ ಭಿನ್ನಾಭಿಪ್ರಾಯವಿಲ್ಲ: ಸಂಸದ ನಳಿನ

Update: 2020-05-30 15:15 GMT

ಮಂಗಳೂರು, ಮೇ 30: ಬಿಜೆಪಿ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ರಾಜ್ಯ ಸರಕಾರ ಸುಭದ್ರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ ಯಾವತ್ತೂ ಅಶಿಸ್ತಿಗೆ ಅವಕಾಶವಿಲ್ಲ. ಸಭೆ ನಡೆಸಿದ ಶಾಸಕರು ನನ್ನ ಜತೆ ಸಂಪರ್ಕದಲ್ಲಿದ್ದು, ಪಕ್ಷ ಸಂಘಟನೆ, ಅಭಿವೃದ್ಧಿ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ವಿಚಾರದಲ್ಲಿ ಹಗಲು ಕನಸು ಕಾಣುತ್ತಿದ್ದಾರೆ ಎಂದರು.

ದೇಶದಲ್ಲಿ ಮೋದಿ ಸರಕಾರ 2ನೇ ಅವಧಿಯ ಅಧಿಕಾರ ಸ್ವೀಕರಿಸಿ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಉತ್ತಮ ಆಡಳಿತ ಮುಖೇನ ಇಡೀ ಜಗತ್ತು ಭಾರತದತ್ತ ನೋಡುವಂತಾಗಿದೆ. ದೇಶದಲ್ಲಿ ಕಾನೂನಾತ್ಮಕವಾಗಿ 370ನೇ ವಿಧಿ ರದ್ದು ಮಾಡುವ ಮೂಲಕ ಏಕತೆಗೆ ನ್ಯಾಯಕೊಡುವ ಕೆಲಸವಾಗಿದೆ. ತ್ರಿವಳಿ ತಲಾಖ್ ರದ್ಧತಿ ಮೂಲಕ ಒಂದು ಸಮುದಾಯದ ಮಹಿಳೆಯರಿಗೆ ನ್ಯಾಯ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಿದಂತಾಗಿದೆ. ದೇಶದ ಪ್ರಧಾನಿ ಮೋದಿಯವರ ಆಡಳಿತದಿಂದ ಜನರ ನಂಬಿಕೆಗೆ ಬೆಲೆ ಬಂದಿದೆ. ಆತಳಿತಾತ್ಮಕವಾಗಿ ನೆರೆ ಬಂದಿರುವ ರಾಜ್ಯಗಳಿಗೆ ಪರಿಹಾರ, ಕೋವಿಡ್ ನಿಯಂತ್ರಣದಲ್ಲಿ ಜಗತ್ತೇ ದೇಶವನ್ನು ಪ್ರಶಂಸೆ ಮಾಡಿದೆ ಎಂದರು.

ಕಳೆದ ಒಂದು ವರ್ಷದಲ್ಲಿ ಮೇಕಿಂಗ್ ಇಂಡಿಯಾ, ಜನ್‌ಧನ್, ಸ್ಕಿಲ್ ಇಂಡಿಯಾ, ಕಿಸಾನ್‌ಕಾರ್ಡ್, ಕಿಸಾನ್ ಸನ್ಮಾನ್ ಮೂಲಕ ಜನ ಸಾಮಾನ್ಯರ ಬದುಕಿಗೆ ಪ್ರೇರಣೆ ನೀಡಿದ್ದಲ್ಲದೆ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಸದಾ ಕಾಲ್ಕೆರೆಯುವ ಚೀನಾಕ್ಕೂ ಸಮರ್ಥವಾಗಿ ಭಾರತ ಉತ್ತರಿಸಿದ್ದು, ದೇಶದ ಶೇ. 92ಮಂದಿ ಮೋದಿ ಆಡಳಿತವನ್ನು ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಬಾಗಿಲು ತೆರೆದಿದೆ. ಈ ಮೂಲಕ ಕಾರ್ಯಕರ್ತರಿಗೆ, ಆಶೀರ್ವಾದ ಮಾಡಿದವರಿಗೆ, ಮತದಾರ ಬಂಧುಗಳಿಗೆ ಮೋದಿಯವರು ವಿಶ್ವಾಸ ಹೆಚ್ಚಿಸಿದ್ದಾರೆ. ರಾಜ್ಯದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದು, ಕೋವಿಡ್ ನಿಯಂತ್ರಣ, ರಾಜ್ಯದ ಅಭಿವೃದ್ಧಿ ದೆಸೆಯಲ್ಲೂ ಉತ್ತಮ ಯೋಜನೆ ಹಾಕಿದ್ದಾರೆ ಎಂದರು.

ಮಸ್ಕತ್ ಸೇರಿದಂತೆ ವಿದೇಶದಲ್ಲಿ ಸಿಲುಕಿರುವವರು ತಾಯ್ನಡಿಗೆ ಮರಳಲು ವಿಮಾನ ವ್ಯವಸ್ಥೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಹತ್ತಾರು ವಿಮಾನಗಳಲ್ಲಿ ಕರ್ನಾಟಕಕಕ್ಕೆ ಅನಿವಾಸಿ ಭಾರತೀಯರು ಬರಲಿದ್ದಾರೆ. ಈಗ ಬೆಂಗಳೂರು, ದಿಲ್ಲಿಗೆ ವಿದೇಶದಿಂದ ವಿಮಾನ ಬರುತ್ತಿದ್ದು, ಅಲ್ಲಿಂದ ಆಂತರಿಕ ವಿಮಾನಯಾನ ಮೂಲಕ ಮಂಗಳೂರಿಗೆ ಬರುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News