‘ಸಪ್ತಪದಿ’ ಬಗ್ಗೆ ಜೂ. 15ರೊಳಗೆ ನಿರ್ಧಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-06-01 09:18 GMT

ಮಂಗಳೂರು, ಜೂ.1: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ನಡೆಸಲುದ್ದೇಶಿಸಲಾಗಿದ್ದ ‘ಸಪ್ತಪದಿ’ಯೋಜನೆಯು ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದ್ದು, ಈ ಕುರಿತು ಜೂನ್ 15ರೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪ್ರಥಮ ವರ್ಷದ ಯೋಜನೆ- ಸಾಧನೆ ಗಳ ಕುರಿತಂತೆ ಮಾಹಿತಿ ನೀಡುವ ಸಲುವಾಗಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಸಪ್ತಪದಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಮೂಹಿಕ ವಿವಾಹಕ್ಕಾಗಿ ವಿವಿಧ ದೇವಾಲಯಗಳಲ್ಲಿ 4000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಸುಮಾರು 1500 ದಷ್ಟು ವಿವಾಹಯೋಗ್ಯ ಅರ್ಜಿಗಳನ್ನು ಆಯ್ದು ಸಪ್ತಪದಿ ಯೋಜನೆಗೆ ಚಾಲನೆ ನೀಡಲು ನಿಶ್ಚಯಿ ಸಲಾಗಿತ್ತು. ಆದರೆ ಕೊರೋನ ಲಾಕ್‌ಡೌನ್‌ನಿಂದಾಗಿ ಯೋಜನೆ ಮುಂದೂಡಲ್ಪಟ್ಟಿತು್ತ. ಇದೀಗ ಲಾಕ್‌ಡೌನ್ ಸಡಿಲಿಕೆಗೊಂಡಿರುವ ಹಿನ್ನೆಲೆಯಲ್ಲಿ ಯೋಜನೆಗೆ ಯಾವ ರೀತಿಯಲ್ಲಿ ಚಾಲನೆ ನೀಡಬೇಕು, ಲಾಕ್‌ಡೌನ್ ನಿಯಮಗಳನುಸಾರ 50 ಜನರಿಗೆ ಸೀಮಿತವಾಗಿರಿಸಿ ವಿವಾಹ ನಡೆಸುವ ಕುರಿತು ಜೂನ್ 15ರೊಳಗೆ ನಿರ್ಧರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಗೊಳಪಡುವ ದೇವಸ್ಥಾನಗಳ ಎರಡು ತಿಂಗಳ ಆದಾಯದಲ್ಲಿ ಶೇ. 35ರಷ್ಟು ಇಳಿಕೆ ಯಾಗಿದೆ. ಲಾಕ್‌ಡೌನ್ ಸಂದರ್ಭ ಜಿಲ್ಲೆಯ ದೇವಸ್ಥಾನಗಳು ಅದರಲ್ಲೂ ಮುಖ್ಯವಾಗಿ ಕದ್ರಿ ದೇವಸ್ಥಾನವೊಂದರಿಂದಲೇ 14000 ಊಟದ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಹೊಸ ಪರಿಕಲ್ಪನೆಯೊಂದಿಗೆ ಮೀನುಗಾರಿಕೆ ಅಭಿವೃದ್ಧಿ

ಕೇಂದ್ರ ಸರಕಾರವು ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ 20,000 ಕೋಟಿ ರೂ. ಮೀನುಗಾರಿಕೆಗೆ ಮೀಸಲಿರಿಸಿದೆ. ಇದರಲ್ಲಿ 3000 ಕೋಟಿ ರೂ. ರಾಜ್ಯಕ್ಕೆ ಬರುವ ಸೂಚನೆ ದೊರಕಿದೆ. ಇದರಲ್ಲಿ ಒಳನಾಡು ಹಾಗೂ ಕಡಲ ಮೀನುಗಾರಿಕೆಗೆ ಆದ್ಯತೆ ನೀಡಿ ಹೊಸ ಪರಿಕಲ್ಪನೆಯೊಂದಿಗೆ ಮೀನುಗಾರಿಕೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.

ಬ್ಯಾಜ್ ಇಲ್ಲದಿದ್ದರೂ ಆಟೋಚಾಲಕರಿಗೆ ಸಿಗಲಿದೆ ನೆರವು

ಆಟೋ ಚಾಲಕರಿಗೆ ಸೇವಾಸಿಂಧುವಿನಲ್ಲಿ ನೋಂದಣಿಗೆ ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆಟೋ ಚಾಲಕನಾಗಿದ್ದಲ್ಲಿ ಬ್ಯಾಜ್ ಇಲ್ಲದೆಯೂ ರಿಕ್ಷಾ ಕೆಸಿ ನಂಬರ್ ಹಾಗೂ ವಾಹನ ನಂಬರ್ ಮೂಲಕ ನೋಂದಣಿ ಮಾಡಿಕೊಂಡು ನೆರವು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ದೇಶದ ಯಾವುದೇ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಕನ್ನಡಿಗರಿಗೆ ನಿರ್ಬಂಧವಿಲ್ಲ. ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಕೊರೋನ ಪೀಡಿತರ ಸಂಖ್ಯೆ ಅಧಿಕವಿರುವುದರಿಂದ ಸ್ವಲ್ಪ ದಿನಗಳ ಕಾಲ ನಿರ್ಬಂಧ ಮಾಡಲಾಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಂದಲೂ ಜಿಲ್ಲೆಗೆ ವಿಮಾನ ಯಾನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಎರಡನೆ ಬಾರಿಗೆ ಪ್ರಧಾನಿಯಾಗಿ ಒಂದು ವರ್ಷ ತುಂಬಿದ್ದು, ಈ ಅವಧಿಯಲ್ಲಿ ತ್ರಿವಳಿ ತಲಾಕ್, ಸಂವಿಧಾನದ 370ನೆ ವಿಧಿ ರದ್ದು, ಪೌರತ್ವ ಕಾಯಿದೆಯಂತಹ ಮಹತ್ವದ ನಿರ್ಧಾರದ ಮೂಲಕ ಜರಿಂದ ಬೆಂಬಲ ಪಡೆದಿದ್ದಾರೆ ಎಂದರು.

ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಗತ್ತಿನಲ್ಲಿಯೇ ಕೊರೋನ ನಿಯಂತ್ರಣದಲ್ಲಿ ನಂ. 1 ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಕೈಗೊಂಡಿರುವ ನಿರ್ಧಾರಗಳು ಕೇಂದ್ರದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News