ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಡ ಹಾಕುವಂತೆ ಕೆಪಿಸಿಸಿಗೆ ಮನವಿ
ಉಡುಪಿ, ಜೂ.1: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಪಿಎಂಸಿ ಹಾಗೂ ವಿದ್ಯುತ್ ಇಲಾಖೆಗೆ ತಂದ ತಿದ್ದುಪಡಿಯಿಂದ ರೈತರಿಗೆ ಆಗುವ ಸಮಸ್ಯೆ ಗಳ ಕುರಿತ ಮನವಿಯನ್ನು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕವು ಇತ್ತೀಚೆಗೆ ಉಡುಪಿಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ಸಲ್ಲಿಸಿತು.
ಸರಕಾರ ಘೋಷಿಸಿರುವ ಲಾಕ್ಡೌನ್ ಪರಿಹಾರ ಕೂಡಲೇ ಫಲಾನುಭವಿ ಗಳ ಖಾತೆಗೆ ಜಮೆಯಾಗುವಂತೆ ಕೆಪಿಸಿಸಿ ಪ್ರಯತ್ನಿಸಬೇಕು ಎಂದು ಕಾಂಗ್ರೆಸ್ ಕಿಸಾನ್ ಘಟಕವು ಒತ್ತಾಯಿಸಿದೆ. ಸಿದ್ದರಾಮಯ್ಯ ಜಾರಿಗೊಳಿಸಿದ ಅನ್ನಭಾಗ್ಯ ದಲ್ಲಿ ಈಗಾಗಲೇ ಅಕ್ಕಿ ಕಡಿತಗೊಳಿಸಲಾಗಿದೆ.
ಕುಮಾರಸ್ವಾಮಿ ಜಾರಿಗೆ ತಂದ ರೈತರ ಸಾಲ ಮನ್ನಾ ಹಾಗೂ ಋಣ ಮುಕ್ತ ಕಾಯಿದೆಯಿಂದ ಜಿಲ್ಲೆಯ ಹಲವಾರು ರೈತರು ವಂಚಿತರಾಗಿದ್ದಾರೆ. ಇನ್ನೂ ಕೂಡ ಸಾಲ ಮನ್ನಾದ ಹಣ ಬ್ಯಾಂಕ್ಗಳಿಗೆ ತಲುಪಿಲ್ಲ. ಈ ಬಗ್ಗೆ ಕೆಪಿಸಿಸಿಯು ಸರಕಾರಕ್ಕೆ ಒತ್ತಡ ತಂದು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೊಟ್ಯಾನ ಉದ್ಯಾವರ, ಕಾರ್ಯದರ್ಶಿ ಉದಯ ಹೆರೂರು, ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರತಿನಿಧಿ ಉದಯ ಶೆಟ್ಟಿ ಕಾರ್ಕಳ, ನಾಗಪ್ಪಕೊಟ್ಟಾರಿ ವಂಡ್ಸೆ, ಮಾರ್ವಿನ್ ಫೆರ್ನಾಂಡಿಸ್ ಉದ್ಯಾವರ, ಬ್ರಹ್ಮಾವರ ಬ್ಲಾಕ್ ಕಿಸಾನ್ ಅಧ್ಯಕ್ಷ ಹರೀಶ್ ಶೆಟ್ಟಿ, ಕೀಲಿಂಜೆ ಜಿಲ್ಲಾ ಘಟಕ ಕಾರ್ಯಾಧ್ಯಕ್ಷ ನಿತ್ಯಾನಂದ ಬಿ.ಆರ್. ಬ್ರಹ್ಮಾವರ, ವಂಡ್ಸೆ ಬ್ಲಾಕ್ ಉಪಾಧ್ಯಕ್ಷ ರವಿ ಗಾಣಿಗ, ಕಾಪು ಬ್ಲಾಕ್ ಕಿಸಾನ್ ಘಟಕ ಉಪಾಧ್ಯಕ್ಷ ಶಿವಾನಂದ ಅಮೀನ್ ಪಾಂಗಾಳ, ಉದ್ಯಾವರ ಕಿಸಾನ್ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಅಬ್ದುಲ್ ುಹಮ್ಮದ್ ಉಪಸ್ಥಿತರಿದ್ದರು.