ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣಕ್ರಮ: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Update: 2020-06-01 16:44 GMT

ಉಡುಪಿ, ಜೂ.1: ಕೋವಿಡ್-2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆ ಆಗಿ ನಂತರ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಲಾಕ್‌ಡೌನ್ ಸಮಯದಲ್ಲಿ ವಾಹನಗಳ ಸಂಚಾರ ವಿರಳವಾದ ಕಾರಣ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ.

ಪ್ರಸ್ತುತಲಾಕ್‌ಡೌನ್ ಸಡಿಲಗೊಳಿಸಿ ಅನೇಕ ವಿನಾಯಿತಿಗಳನ್ನು ನೀಡಲಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು ರಸ್ತೆ ಅಪಘಾತ ಗಳು ಹೆಚ್ಚಾಗುತ್ತಿವೆ. ರಸ್ತೆಗಳಲ್ಲಿ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ದ್ವಿಚಕ್ರ ವಾಹನ ಸವಾರರು ತಮಗೆ ನಿದಿ ಪಡಿಸಿದ ಪಥದಲ್ಲಿ ಸಂಚರಿಸದೆ ಅತಿ ವೇಗದಲ್ಲಿ ಮೊದಲ ಪಥಗಳಲ್ಲಿ ಸಂಚರಿಸುತ್ತಿರುವ ಕಾರಣ ಅಪಘಾತ ಗಳಾತ್ತಿರುವುದನ್ನು ಗಮನಿಸಲಾಗಿದೆ.

ಅಲ್ಲದೇ ದ್ವಿಚಕ್ರ ವಾಹನಗಳಲ್ಲಿ 3ಜನರು ಸಂಚರಿಸುವುದು, ಹೆಲ್ಮೆಟ್ ಧರಿಸದೆ ಇರುವುದು, ಮಾಸ್ಕ್ ಧರಿಸದೆ ಇರುವುದು ಕಂಡು ಬರುತ್ತದೆ. ಇಂತಹ ಅತಿರೇಕ ಗಳಿಂದ ಉಡುಪಿ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತಿರುವುದು ಕಳವಳಕಾರಿ ವಿಷಯವಾಗಿದೆ. ಮಳೆಗಾಲದ ಪ್ರಾರಂಭದಲ್ಲಿ ಗ್ರೀಸ್, ಆಯಿಲ್ ಇತ್ಯಾದಿ ರಸ್ತೆಗೆ ಬಿದ್ದಿರುವ ಕಾರಣದಿಂದ ಎಲ್ಲಾ ರೀತಿಯ ವಾಹನಗಳು ಸ್ಕಿಡ್  ಆಗಿ ಅಪಘಾತಗಳು ಸಂಭಸುತ್ತಿವೆ.

ಆದುದರಿಂದ ಅತೀ ಜಾಗ್ರತೆಯಿಂದ ನಿಯಮಿತ ವೇಗದಲ್ಲಿ ವಾಹನ ಚಲಾಯಿಸುವಂತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ ನಿಗದಿತ ಪಥ ದಲ್ಲಿಯೇ ಸಂಚರಿಸಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸಾರ್ವಜನಿಕರಲ್ಲಿ ಹಾಗೂ ವಾಹನ ಬಳಕೆದಾರರಲ್ಲಿ ಮನವಿ ಮಾಡಿದ್ದಾರೆ. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News