ಮುಂಬೈ ತುಳು, ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ

Update: 2020-06-01 17:56 GMT

ಮಂಗಳೂರು, ಜೂ. 1:  ಮುಂಬೈ ತುಳುವರು ಮತ್ತು ಕನ್ನಡಿಗರೆಂದರೆ ಕೇವಲ ಉದ್ಯಮಿಗಳ ಕೂಟ ಮಾತ್ರವಾಗಿರದೆ ಅದು ಸಾಕಷ್ಟು ಮಧ್ಯಮ ವರ್ಗದ ಜನರು ಹಾಗೂ ಕಾರ್ಮಿಕ ಬಡಪಾಯಿಗಳನ್ನು ಹೊಂದಿದ್ದು ಕಳೆದ ಎರಡು ತಿಂಗಳುಗಳಿಂದ ಸರಿಯಾದ ಕೆಲಸವಿಲ್ಲದೆ, ವೇತನ ರಹಿತವಾಗಿ ತಮ್ಮ ಒಪ್ಪೊತ್ತಿನ ಆಹಾರಕ್ಕೂ ಬವಣೆ ಪಡುತ್ತಿರುವ ಅದೆಷ್ಟೋ ಜನರು ಕೂಡಾ ಇದೇ ವರ್ಗದಲ್ಲಿದ್ದು ಅವರೆಲ್ಲರೂ ಹೇಗಾದರೂ ಒಮ್ಮೆ ತಮ್ಮ ಊರಿಗೆ ಮರಳಿದರೆ ಸಾಕು ಎನ್ನುವ ಆಶಾಭಾವನೆಯಲ್ಲಿ ಸರಕಾರ ತಮ್ಮನ್ನು, ಅವರವರ ಮನೆಗೆ ಸೇರಿಸುವ ವ್ಯವಸ್ಥೆಯ ಬಗ್ಗೆ ಏನಾದರೊಂದು ನಿರ್ಣಯವನ್ನು ಕ್ಷಿಪ್ರವಾಗಿ ಕೈಗೊಳ್ಳಬಹುದೆಂಬ ದಿನಗಳನ್ನು ಎದುರು ನೋಡುತ್ತಿದ್ದಾರೆ. ಆದ್ದರಿಂದ, ಮುಂಬೈ, ಪುಣೆ, ಮತ್ತು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಸಿಲುಕಿರುವ ವಿಶೇಷವಾಗಿ ಕರಾವಳಿ ವಲಯದ ತುಳುವರನ್ನು ಸೇರಿದಂತೆ ಎಲ್ಲಾ ಕನ್ನಡಿಗರನ್ನು ಸರಕಾರ ಅವರವರ ಮನೆಗಳಿಗೆ ಅಥವಾ ಅವರವರ ಕುಟುಂಬದವರಿಗೆ ತಲುಪಿಸುವ ಕಾರ್ಯವನ್ನು ಬಹಳ ತುರ್ತಾಗಿ ಕೈಗೊಳ್ಳಬೇಕಾಗಿದೆಯೆಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ  ಕೊರೋನ ಭೀತಿಯು ಕರ್ನಾಟಕದಲ್ಲಿನ ಮಟ್ಟಕ್ಕಿಂತ ಅಧಿಕವೇ ಇರುವುದರಿಂದ, ಇನ್ನು ಇವರ ವಾಪಾಸಾತಿಗೆ ಮೀನ-ಮೇಷವೆಣಿಸುವುದರಿಂದಾಗಿ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಜನರನ್ನು ಅಪಾಯಕ್ಕೆ ದೂಡಿದಂತ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾಗಬಹುದಲ್ಲದೆ, ಇವೆಲ್ಲವೂ ಸರಕಾರದ ನಿಷ್ಕ್ರಿಯ ನಿಲುವಿನಿಂದಾಗಿರುವುದರಿಂದ, ಸರಕಾರಕ್ಕೆ ಹೆಚ್ಚು ಪ್ರತಿಕೂಲವಾಗಿ ಪರಿಣಮಿಸ ಬಹುದು ಎಂಬುವುದಾಗಿ ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ ಅವರು ಈ ನಿಟ್ಟಿನಲ್ಲಿ ಸರಕಾರವು ಜೂನ್ 8, 15 ಎಂದು ಗಡುವುಗಳನ್ನು ವಿಸ್ತರಿಸುತ್ತಾ ಇನ್ನಷ್ಟು ದಿನಗಳನ್ನು ಮುಂದೂಡದೆ ಕೂಡಲೇ ಅವರನ್ನು ಹಂತ ಹಂತವಾಗಿ ಕರೆತರುವ ಹಾಗೂ ತರುವಾಯ ಅವರ ಕ್ವಾರಂಟೈನ್ ವ್ಯವಸ್ಥೆಗಳ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಹೊಣೆಯನ್ನು ಹೊಂದಿದೆಯೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News