ಬಜ್ಪೆಯ ಯುವಕನ ಕೊಲೆ ಪ್ರಕರಣ: ಐವರ ಬಂಧನ

Update: 2020-06-02 16:21 GMT

ಮಂಗಳೂರು, ಜೂ. 1: ಬಜ್ಪೆಯಲ್ಲಿ ಕ್ಲುಲ್ಲಕ ವಿಚಾರಕ್ಕೆ ಇತ್ತಂಡಗಳ ನಡುವಿನ ಹೊಡೆದಾಟದಲ್ಲಿ ಸಂಭವಿಸಿದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು, ಮೋಕ್ಷಿತ್ ಮತ್ತು ಧನರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ಮತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾವಿ ತೋಡುವಾಗ ಕಾಲು ಜಾರಿ ಬಿದ್ದವನನ್ನು ನೋಡಿ ಹೀಯಾಳಿಸಿ ನಕ್ಕ ವಿಚಾರದಲ್ಲಿ ಬಜ್ಪೆಯ ದೇವರಗುಡ್ಡೆಯಲ್ಲಿ ಮೇ 31ರಂದು ರಾತ್ರಿ 7:45ಕ್ಕೆ ಎರಡು ತಂಡಗಳ ನಡುವಿನ ಹೊಡೆದಾಟದಲ್ಲಿ ಕರಂಬಾರು ನಿವಾಸಿ ಕೀರ್ತನ್ ಕೊಲೆಯಾಗಿದ್ದ. ಅದೇ ಘಟನೆಯಲ್ಲಿ ಆತನೊಂದಿಗೆ ಇದ್ದ ನಿತಿನ್ ಪೂಜಾರಿ, ಮನೀಶ್ ಜೋಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ, ಕೊಲೆಯತ್ನ ಮತ್ತು ಹಲ್ಲೆಯ ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು, ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಸಹಕಾರದೊಂದಿಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News