ಕೋಟ: ನಿವೃತ್ತಿಯ ದಿನದಂದೇ ಕುಸಿದು ಬಿದ್ದಿದ್ದ ಎಎಸ್ಸೈ ಮೃತ್ಯು
ಕೋಟ, ಜೂ.2: ತನ್ನ ಬೀಳ್ಕೋಡುಗೆ ಸಮಾರಂಭದ ಸಂದರ್ಭ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ಆನಂದ ವೆಂಕಟರಾಮ್(60) ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ನಿವೃತ್ತಿಯಾಗಿರುವ ಇವರಿಗೆ ರವಿವಾರ ಕೋಟ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಊಟ ಮಾಡುತ್ತಿದ್ದ ಇವರು ಅಲ್ಲೇ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥರಾದರೆನ್ನಲಾಗಿದೆ. ಮೆದಳಿನ ಸಂಬಂಧದ ಕಾಯಿಲೆಗೆ ತುತ್ತಾಗಿದ್ದ ಇವರು, ಚಿಕಿತ್ಸೆ ಫಲಕಾರಿ ಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೈಂದೂರು ನಿವಾಸಿಯಾಗಿರುವ ಆನಂದ್, ಮೂಡುಬಿದ್ರೆ, ಕೋಟ, ಶಂಕರ ನಾರಾಯಣ, ಗಂಗೊಳ್ಳಿ, ಕಾಪು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಎಎಸೈ ಆಗಿ ಪದೋನ್ನತ್ತಿ ಹೊಂದಿದ ಇವರು ನಿವೃತ್ತಿಯವರೆಗೆ ಕೋಟ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.