ಮಂಗಳೂರು: ಜೂ.5ರಿಂದ ಬೀದಿಬದಿ ವ್ಯಾಪಾರಿಗಳ ತೆರವಿಗೆ ಟೈಗರ್ ಕಾರ್ಯಾಚರಣೆ
Update: 2020-06-03 06:38 GMT
ಮಂಗಳೂರು, ಜೂ.3: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಫುಟ್ ಪಾತ್ ವ್ಯಾಪಾರಸ್ಥರನ್ನು ತೆರವುಗೊಳಿಸಲು ಜೂ.5ರಿಂದ ಟೈಗರ್ ಕಾರ್ಯಾಚರಣೆ ಪ್ರಾಂಭಿಸಲಾಗುವುದು ಎಂದು ಮೇಯರ್ ದಿವಾಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಗರದ ಫುಟ್ ಪಾತ್ ಗಳನ್ನು ಅತಿಕ್ರಮಿಸಿ ಹಲವಾರು ವ್ಯಾಪಾರಸ್ಥರು ಹೂವು, ಹಣ್ಣು, ತರಕಾರಿ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಕುರಿತು ಪಾಲಿಕೆಗೆ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯ ರಸ್ತೆ ಬದಿ ಮತ್ತು ಫುಟ್ ಪಾತ್ಗಳಲ್ಲಿ ಮಾರಾಟ ಮಾಡುವ ಎಲ್ಲ ಮಾರಾಟಗಾರರು ಇನ್ನು ಮುಂದಕ್ಕೆ ಮಾರಾಟ ಮಾಡಬಾರದು. ಟೈಗರ್ ಕಾರ್ಯಾಚರಣೆಯ ವೇಳೆ ವ್ಯಾಪಾರಸ್ಥರಿಂದ ಪಾಲಿಕೆ ವಶಕ್ಕೆ ಪಡೆಯುವ ಸಾಮಗ್ರಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.