ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಪ್ರಸ್ತಾವ: ಕೇಂದ್ರ ಸರ್ಕಾರದ ವಿರುದ್ಧ ನೌಕರರ ಪ್ರತಿಭಟನೆ

Update: 2020-06-03 09:41 GMT

ಮಂಗಳೂರು, ಜೂ.3: ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಹೊರಟಿರುವುದು, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ/ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಕವಿ ಪ್ರ ನಿ ನೌಕರರ ಸಂಘ ಮತ್ತು ಅಸೋಸಿಯೇಶನ್ ಗಳ ಒಕ್ಕೂಟ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದೇ ವೇಳೆ ಮಂಗಳೂರಿನಲ್ಲೂ ಕೆ.ಪಿ.ಟಿಸಿ.ಎಲ್. ರಾಜ್ಯ ನೌಕರರ ಸಂಘದ ನೌಕರರು/ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕೆ.ಪಿ.ಟಿಸಿ.ಎಲ್. ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ ನೇತ್ರತ್ವದಲ್ಲಿ ಸೋಮವಾರ ಅತ್ತಾವರ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಒಕ್ಕೂಟದ ಸದಸ್ಯರೆಲ್ಲರೂ ಬಲಗೈಗೆ ಕಪ್ಪುಪಟ್ಟಿ (ಬ್ಯಾಡ್ಜ್) ಧರಿಸಿ  ಒಂದು ದಿನದ ಸಾಂಕೇತಿಕ ಪ್ರತಿಭಟನೆಯನು ನಡೆಸಿ ಸರ್ಕಾರದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಚ್.ಎಸ್.ಗುರುಮೂರ್ತಿ, ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿಯನ್ನು ತರಲು ಹೊರಟಿರುವುದು, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ/ ಖಾಸಗೀಕರಣ ಮಾಡುತ್ತಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಕೇಂದ್ರ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿ ಈಗಾಗಲೇ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು, ಜನಸಾಮಾನ್ಯರಿಗೂ ಇದರಿಂದ ಹೊರೆಯಾಗುವುದರಿಂದ ಕೇಂದ್ರ ಸರ್ಕಾರವು ಈ ಪ್ರಸ್ತಾವವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಬೇಡ, 2003ರ ವಿದ್ಯುತ್ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ-2020 ಬೇಡವೇ ಬೇಡ ಎಂದು ಪ್ರತಿಭಟನಾಕಾರರು ಈ ವೇಳೆ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಂಜಪ್ಪ, ಅಧೀಕ್ಷಕ ಇಂಜಿನಿಯರ್ ಅತ್ತಾವರ, ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣರಾಜ್, ಕೆ.ಪಿ.ಟಿಸಿ.ಎಲ್. ರಾಜ್ಯ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಸಂತೋಷ್ ಕುಮಾರ್ ಮುಂತಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News