ಉಡುಪಿ: ಮತ್ತೆ ಮಹಾರಾಷ್ಟ್ರದಿಂದ ಬಂದ 61 ಮಂದಿಗೆ ಕೊರೋನ ಪಾಸಿಟಿವ್

Update: 2020-06-03 14:52 GMT

ಉಡುಪಿ, ಜೂ.3: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 61 ಮಂದಿಯಲ್ಲಿ ಬುಧವಾರ ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ ಅಧಿಕೃತ ವಾಗಿ 471ಕ್ಕೇರಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇದರಿಂದ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಕೊರೋನ ಪಾಸಿಟಿವ್ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಇದೀಗ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕಿಳಿದಿದೆ. ಕಲಬುರ್ಗಿ ಒಟ್ಟು 510 ಪಾಸಿಟಿವ್ ಕೇಸುಗಳೊಂದಿಗೆ ಇಂದು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಉಳಿದಂತೆ ಬೆಂಗಳೂರು ನಗರ (417), ಮಂಡ್ಯ (302) ಹಾಗೂ ಯಾದಗಿರಿ (299) ಐದರವರೆಗಿನ ಸ್ಥಾನಗಳಲ್ಲಿವೆ.

ಇಂದು ಸೋಂಕು ಪತ್ತೆಯಾದ 61 ಮಂದಿಯೂ ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದಾರೆ. ಇವರಲ್ಲಿ 44 ಪುರುಷರು ಹಾಗೂ 17 ಮಹಿಳೆಯರಿದ್ದಾರೆ. ಇವರಲ್ಲಿ ಹತ್ತು ವರ್ಷದೊಳಗಿನ ಪ್ರಾಯದ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರಿದ್ದಾರೆ. ಅಲ್ಲದೇ 60 ವರ್ಷ ಮೇಲ್ಪಟ್ಟ ಪ್ರಾಯದ ಇಬ್ಬರು ವೃದ್ಧರೂ ಈ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇಂದು ಪಾಸಿಟಿವ್ ಬಂದ ಎಲ್ಲಾ 61 ಪಾಸಿಟಿವ್ ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲರನ್ನೂ ಅವರವರ ಮನೆಯಿಂದ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 57 ಮಂದಿ ಕುಂದಾಪುರ ತಾಲೂಕಿನವರಾದರೆ ಉಳಿದ ನಾಲ್ವರು ಕಾರ್ಕಳ ತಾಲೂಕಿನವರು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಕೊರೋನ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯ 62 ಮಂದಿ ಪಾಸಿಟಿವ್ ಎಂದು ಬಂದಿದ್ದರೂ, ಉಡುಪಿ ಜಿಲ್ಲೆಯ ಪಟ್ಟಿಯಲ್ಲಿದ್ದ ಒಬ್ಬರು ಪಕ್ಕದ ದಕ್ಷಿಣ ಕನ್ನಡದವರಾಗಿರುವುದು ಕಂಡು ಬಂದಿದೆ. ಹೀಗಾಗಿ ಜಿಲ್ಲೆಯ 61 ಮಂದಿ ಪಾಸಿಟಿವ್ ಬಂದಿದ್ದಾರೆ ಎಂದವರು ನುಡಿದರು.

ಇಬ್ಬರು ಇನ್ನೂ ನಾಪತ್ತೆ: ಕಳೆದ ಸೋಮವಾರ ಮೊಬೈಲ್‌ನ್ನು ಶುಚ್‌ಆಪ್ ಮಾಡಿ ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದ ಐವರಲ್ಲಿ ಮೂವರನ್ನು ಪತ್ತೆ ಹಚ್ಚಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಿಬ್ಬರು ನಾಪತ್ತೆಯಾಗಿದ್ದು, ಊರನ್ನೇ ತೊರೆದಿರಬೇಕೆಂದು ಶಂಕಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು. ಸೋಮವಾರ ಒಟ್ಟು 73 ಮಂದಿ ಪಾಸಿಟಿವ್ ಬಂದಿದ್ದು, ಇವರಲ್ಲಿ 68 ಮಂದಿಯನ್ನು ಅಂದೇ ಗುರುತಿಸಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಉಡುಪಿ ಜಿಲ್ಲೆ ಇಂದು 20 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸ ಲಾಗಿದ್ದು, ಇದರಿಂದ ಆಸ್ಪತ್ರೆಯಿಂದ ತೆರಳಿದವರ ಒಟ್ಟು ಸಂಖ್ಯೆ 84ಕ್ಕೇರಿದೆ. ಜಿಲ್ಲೆಯಲ್ಲೀಗ 386 ಸಕ್ರೀಯ ಪ್ರಕರಣಗಳಿವೆ. ಒಬ್ಬರು ಮೃತಪಟ್ಟಿದ್ದಾರೆ. ನಿನ್ನೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 65 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಡಾ.ಸೂಡ ವಿವರಿಸಿದರು.

61 ಪಾಸಿಟಿವ್, 851ಸ್ಯಾಂಪಲ್ ನೆಗೆಟಿವ್: ಬುಧವಾರ ಒಟ್ಟು 912 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 61 ಪಾಸಿಟಿವ್ ಆಗಿದ್ದರೆ, ಉಳಿದ 851 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೇವಲ ಇಬ್ಬರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಇವರಲ್ಲಿ ತಲಾ ಒಬ್ಬರು ಉಸಿರಾಟ ತೊಂದರೆ ಹಾಗೂ ಶೀತಜ್ವರದಿಂದ ಬಳಲುವವರು ಎಂದು ಡಿಎಚ್‌ಓ ತಿಳಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,513ಕ್ಕೇರಿದೆ. ಇವುಗಳಲ್ಲಿ ಬುಧವಾರದವರೆಗೆ ಒಟ್ಟು 7577ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 7106 ನೆಗೆಟಿವ್ ಆಗಿದ್ದರೆ, ಇಂದಿನ 61 ಸೇರಿ ಒಟ್ಟು 471 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 4936 ಸ್ಯಾಂಪಲ್‌ಗಳ ವರದಿ ಬರೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ 8 ಮಂದಿ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಆರು ಮಂದಿ ಪುರುಷರು, ಇಬ್ಬರು ಮಹಿಳೆ ಯರು ಇದರಲ್ಲಿ ಸೇರಿದ್ದಾರೆ. ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯ ಆರು ಮಂದಿ ಹಾಗೂ ಶೀತಜ್ವರದವರು ಒಬ್ಬರು ಇದರಲ್ಲಿ ಸೇರಿದ್ದಾರೆ.

ಬುಧವಾರ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 9 ಮಂದಿ ಬಿಡುಗಡೆಗೊಂಡಿದ್ದು, 69 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 734 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆ ಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 12 ಮಂದಿ ಇಂದು ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 4988 ಮಂದಿ ಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4184 ಮಂದಿ (ಇಂದು 73) 28 ದಿನಗಳ ನಿಗಾವಣೆ ಹಾಗೂ 4808 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗ 79 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 124 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದು, 32 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News