ನೇತ್ರಾವತಿ ವೀರರಿಗೆ ಜಿ.ಕೆ. ಬ್ರದರ್ಸ್ ವತಿಯಿಂದ ಸನ್ಮಾನ
Update: 2020-06-03 16:15 GMT
ಬಂಟ್ವಾಳ : ಜಿಕೆ ಬ್ರದರ್ಸ್ ಕುಟುಂಬಸ್ಥರು ಗೂಡಿನಬಳಿ ಇವರ ವತಿಯಿಂದ ನೇತ್ರಾವತಿ ವೀರರು ಮತ್ತು ಕೊಡುಗೈ ದಾನಿ ಅಬ್ದುರ್ರಹ್ಮಾನ್ ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅವರನ್ನು ಜಿಕೆ ವಠಾರದಲ್ಲಿ ಸನ್ಮಾನಿಸಲಾಯಿತು.ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪರ್ವೇಝ್ ಜಿಕೆ ಪ್ರಾಸ್ತಾವಿಕ ಸ್ವಾಗತ ಭಾಷಣಗೈದರು. ನೇತ್ರಾವತಿ ವೀರ ಮುಹಮ್ಮದ್ ಮಮ್ಮು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಲೀಂ ಜಿಕೆ ಗೌರವಧನ ಹಸ್ತಾಂತರಿಸಿದರು. ಅತಾವುಲ್ಲ ಜಿಕೆ ಧನ್ಯವಾದ ಸಲ್ಲಿಸಿ, ಸ್ಥಳೀಯ ಶಿಕ್ಷಕರೂ ಆದ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕೆಲವು ದಿನಗಳ ಹಿಂದೆ ಕಲ್ಲಡ್ಕದ ನಿಶಾಂತ್ ಎಂಬ ಯುವಕ ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು, ನಿಶಾಂತ್ ನನ್ನು ರಕ್ಷಿಸಲು ಜೀವದ ಹಂಗು ತೊರೆದು ನದಿಗೆ ಹಾರಿ ಪ್ರಯತ್ನಿಸಿದ್ದ ಯುವಕರನ್ನು ಸನ್ಮಾನಿಸಲಾಯಿತು.