ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-06-03 17:17 GMT

ಉಡುಪಿ, ಜೂ.3: ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ, ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವ ವರು ರಾಜ್ಯದ ಗಡಿಯಲ್ಲಿರುವ ಸ್ವೀಕಾರ (ಗಡಿ ಸ್ವಾಗತ ಕೇಂದ್ರ-ಬಿಆರ್‌ಸಿ) ಕೇಂದ್ರ ದಲ್ಲಿ ಸೂಚಿಸುವ, ತಮ್ಮ ಜಿಲ್ಲೆಯ ಸ್ವೀಕಾರ ಕೇಂದ್ರ (ಜಿಲ್ಲಾ ಸ್ವಾಗತ ಕೇಂದ್ರ- ಡಿಆರ್‌ಸಿ)ಕ್ಕೆ ಹಾಜರಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕ್ವಾರಂಟೈನ್‌ಗೆ ಒಳಪಡಬೇಕು.

ಮಹಾರಾಷ್ಟ್ರದಿಂದ ಆಗಮಿಸುವವರು 7 ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಬೇಕು. ಇತರೆ ರಾಜ್ಯದಿಂದ ಆಗಮಿಸುವವರು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು. ರೈಲಿನಲ್ಲಿ ಬರುವವರಿಗೆ ಅವರು ಇಳಿಯುವ ರೈಲ್ವೆ ನಿಲ್ದಾಣದಲ್ಲಿರುವ ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೊಂದಾಯಿಸಬೇಕು. ನೊಂದಾಯಿಸಿದ ಸ್ಥಳಕ್ಕೆ ತೆರಳದೇ ಮಾರ್ಗ ಮಧ್ಯೆ ತಪ್ಪಿಸಿಕೊಂಡಲ್ಲಿ ಅಂತಹವರ ವಿರುದ್ದ ಕೂಡಲೇ ಎಫ್‌ಐಆರ್ ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಿದ ಜಿಲ್ಲಾಧಿಕಾರಿ, ಕ್ವಾರಂಟೈನ್ ಕೇಂದ್ರಗಳಿಗೆ ತಮ್ಮದೇ ವೆಚ್ಚದಲ್ಲಿ  ತೆರಳಬೇಕು ಎಂದು ಹೇಳಿದ್ದಾರೆ.

ಜಿಲ್ಲಾ ಸ್ವೀಕಾರ ಕೇಂದ್ರದಲ್ಲಿ ನೊಂದಣಿಯಾದ ಎಲ್ಲರಿಗೂ ಸೀಲ್ ಹಾಕಿ, ಸಂಬಂದಪಟ್ಟ ತಾಲೂಕಿನ ಗ್ರಾಮಗಳಿಗೆ ಕಳುಹಿಸಬೇಕು. ಗ್ರಾಮಗಳಿಗೆ ಆಗಮಿಸುವ ಹೊರರಾಜ್ಯದ ಜನತೆಗೆ ಗ್ರಾಮದಲ್ಲಿ ಕ್ವಾರಂಟೈನ್‌ಗೆ ಒಳ ಪಡಿಸಲು , ಎಲ್ಲಾ ಗ್ರಾಪಂಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ತೆರೆ ಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಎಲ್ಲಾ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಪಂಗಳಲ್ಲಿ ಕ್ವಾರಂಟೈನ್ ಕೇಂದ್ರಗಳಿಗೆ ಊಟೋಪ ಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆಹಾಗೂ ಪ್ರತಿನಿತ್ಯ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಹೊರರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಅಪ್ಲಿಕೇಷನ್ ಗಳನ್ನು ಡೌನ್ ‌ಲೋಡ್ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News