ತೆಂಗಿನಮರ ಹತ್ತುವ ಯಂತ್ರದಿಂದ ಬಿದ್ದು ಕೃಷಿಕ ಮೃತ್ಯು
Update: 2020-06-03 17:23 GMT
ಹೆಬ್ರಿ, ಜೂ.3:ತೆಂಗಿನಮರ ಹತ್ತುವ ಯಂತ್ರದಲ್ಲಿ ತೆಂಗಿನ ಮರದಿಂದ ಇಳಿಯುವಾಗ ಕೃಷಿಕರೊಬ್ಬರು ಜಾರಿ ಬಿದ್ದು ಮೃತಪಟ್ಟ ಘಟನೆ ಜೂ. 2ರಂದು ಸಂಜೆ ವೇಳೆ ಕುಚ್ಚೂರು ಗ್ರಾಮದ ಹುತ್ರಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ಹುತ್ರಬೈಲು ನಿವಾಸಿ ಕರುಣಾಕರ ನಾಯ್ಕ್(35) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ತೆಂಗಿನ ಮರದ ಕಾಯಿ ಕೊಯ್ಯಲು ಮರ ಹತ್ತುವ ಯಂತ್ರದ ಮೂಲಕ ಮರ ಹತ್ತಿದ್ದರು. ಕಾಯಿಯನ್ನು ತೆಗೆದು ಯಂತ್ರದ ಮೂಲಕ ಕೆಳಗೆ ಇಳಿಯುತ್ತಿರು ವಾಗ ಅವರ ಕಾಲು ಅಕಸ್ಮಿಕವಾಗಿ ಜಾರಿತ್ತೆನ್ನಲಾಗಿದೆ.
ಇದರ ಪರಿಣಾಮ ಸುಮಾರು 35 ಅಡಿ ಮೇಲಿಂದ ಕೆಳಗೆ ಬಿದ್ದು ಗಂಭೀರ ವಾಗಿ ಗಾಯಗೊಂಡ ಅವರು, ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.