ಅವಹೇಳನಕಾರಿ ಹೇಳಿಕೆ ನೀಡಿರುವ ಡಾ.ಆರತಿ ಲಾಲ್‌ಚಾಂದಿನಿ ವಿರುದ್ಧ ಪ್ರಕರಣ ದಾಖಲಿಸಿ: ಎಸ್‌ಡಿಪಿಐ

Update: 2020-06-04 09:39 GMT

ಹೊಸದಿಲ್ಲಿ : ವೀಡಿಯೊ ಸಂದರ್ಶನವೊಂದರಲ್ಲಿ ಮುಸ್ಲಿಮರ ವಿರುದ್ಧ ಡಾ. ಆರತಿ ಲಾಲ್‌ಚಾಂದಿನಿ ನೀಡಿರುವ ಅವಹೇಳನಕಾರಿ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವೊಕೇಟ್‌ ಶರ್ಫುದ್ದೀನ್ ಅಹ್ಮದ್ ಅವರು, ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆ ನೀಡಿರು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈದ್ಯಕೀಯ ವೃತ್ತಿಯ ಎಲ್ಲಾ ಮೌಲ್ಯಗಳನ್ನು ಉಲ್ಲಂಘಿಸಿ ವಿಷಬಿತ್ತುವ ಹೇಳಿಕೆ ನೀಡಿರುವ ಡಾ. ಆರತಿಯವರ ವೈದ್ಯಕೀಯ ನೋಂದಣಿಯನ್ನು ರದ್ದುಗೊಳಿಸುವಂತೆ ಅವರು ಭಾರತೀಯ ವೈದ್ಯಕೀಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ.ಆರತಿಯವರು ತಬ್ಲೀಗ್ ಜಮಾಅತಿನವರನ್ನು ಭಯೋತ್ಪಾದಕರು ಎಂದು ಕರೆದಿದ್ದು, ತಬ್ಲೀಗಿಗಳನ್ನು ಜೈಲಿನ ಏಕಾಂತ ಸೆಲ್‌ಗಳಿಗೆ ತಳ್ಳಬೇಕು ಅಥವಾ ಅವರಿಗೆ ಯಾವುದೇ ಚಿಕಿತ್ಸೆ ನೀಡದೆ ಅರಣ್ಯಗಳಿಗೆ ಅಟ್ಟಬೇಕು, ಅವರಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಸಂಪನ್ಮೂಲಗಳನ್ನು ವ್ಯರ್ಥ ಮಾಡಿದಂತೆ ಎಂದು ಹೇಳಿಕೆ ನೀಡಿದ್ದಾರೆ. 20-30 ಕೋಟಿಯಷ್ಟಿರುವ ಜನರು ನೂರು ಕೋಟಿ ಭಾರತೀಯರ ಜೀವಗಳಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂದು ಮುಸ್ಲಿಂ ಜನ ಸಂಖ್ಯೆಯನ್ನು ಗುರಿಯಾಗಿಸಿಕೊಂಡು ಅವರು ಹೇಳಿಕೆ ನೀಡಿದ್ದಾರೆ.

ವೈದ್ಯ ವೃತ್ತಿಯಲ್ಲಿರುವವರು, ಜಾತಿ, ಮತ, ಧರ್ಮ, ಲಿಂಗ ಇತ್ಯಾದಿ ತಾರತಮ್ಯವಿಲ್ಲದೆ  ರೋಗಿಗಳಿಗೆ ಸಮಾನವಾಗಿ ಚಿಕಿತ್ಸೆ ನೀಡಲು ಬದ್ಧರಾ ಗಿರುವ ವೈದ್ಯಕೀಯ ಸಮುದಾಯಕ್ಕೆ ಡಾ. ಆರತಿಯವರು ಕಳಂಕಿತರಾಗಿದ್ದಾರೆ. ಮುಸ್ಲಿಂ ಸಮುದಾಯದ ರೋಗಿಗಳು ಚಿಕಿತ್ಸೆಗಾಗಿ ಅಂತಹ ವೈದ್ಯರ ಬಳಿ ಹೇಗೆ ಹೋಗುತ್ತಾರೆ ಎಂದು ಶರ್ಫುದ್ದೀನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ವಿರುದ್ಧ ವಿಷ ಕಾರುವ ಇಂತಹ ಕಳಂಕಿತ ವ್ಯಕ್ತಿಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿ ಗಳು ನೋಡಿಕೊಳ್ಳಬೇಕು. ಹಗೆತನದ ಈ ಟೀಕೆಗಳಿಗಾಗಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪ್ರತಿಷ್ಠಿತ ಸಂಸ್ಥೆಯ ಪ್ರಾಂಶುಪಾಲರ ಹುದ್ದೆಯಿಂದ ಅವರನ್ನು ತಕ್ಷಣ ತೆಗೆದುಹಾಕಬೇಕು ಎಂದು ಅಡ್ವೊಕೇಟ್ ಶರ್ಫುದ್ದೀನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News