×
Ad

ನದಿಪಾಲಾಗುವವರ ರಕ್ಷಣೆಗೆ ನಾಡದೋಣಿ ಕೊಡುಗೆ ನೀಡಿದ ‘ಸೇವಾಂಜಲಿ ಪ್ರತಿಷ್ಠಾನ’

Update: 2020-06-11 14:25 IST

ಬಂಟ್ವಾಳ, ಜೂ.11: ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವರನ್ನು ರಕ್ಷಿಸಲು ನಾಡದೋಣಿಯೊಂದು ಬೇಕೆನ್ನುವ ಪಾಣೆಮಂಗಳೂರು ಪರಿಸರದ ಈಜುಗಾರರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ, ಏರ್ಯ ಬಾಲಕೃಷ್ಣ ಹೆಗ್ಡೆ ಮತ್ತಿತರರ ಸಹಕಾರದೊಂದಿಗೆ ಅಂದಾಜು 70 ಸಾವಿರ ರೂ. ಮೌಲ್ಯದ ಹೊಸ ನಾಡ ದೋಣಿಯನ್ನು ಈ ಈಜುಗಾರರಿಗೆ ನೀಡಿದೆ. ಗುರುವಾರ ಬೆಳಗ್ಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಸಭಾಭವನದಲ್ಲಿ ಸೇವಾಂಜಲಿ ರಕ್ಷಕ ನಾಮಾಂಕಿತ ದೋಣಿಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ತಾಲೂಕಿನ ವಿವಿಧೆಡೆ ನೇತ್ರಾವತಿ ನದಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚಾಗಿವೆ. ಅಲ್ಲದೆ ಆಕಸ್ಮಿಕವಾಗಿ ನದಿಗೆ ಬಿದ್ದು ಕೊಚ್ಚಿ ಹೋಗುವಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಈಜುಗಾರರು ನದಿಗೆ ಹಾರಿ ನೀರಲ್ಲಿ ಕೊಚ್ಚಿ ಹೋಗುತ್ತಿರುವರನ್ನು ಸ್ವಯಂಪ್ರೇರಿತರಾಗಿ ರಕ್ಷಿಸುವ ಪ್ರಯತ್ನ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇವರಿಗೆ ದೋಣಿಯ ವ್ಯವಸ್ಥೆಯಾಗಲಿ, ಲೈಫ್ ಜಾಕೆಟ್ ನಂತಹ ಮೂಲ ಭೂತ ಸೌಕರ್ಯಗಳಿಲ್ಲ. ಈಜುಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಪಾಯಕಾರಿ ಸ್ಥಿತಿಯಲ್ಲಿ ಜೀವ ರಕ್ಷಿಸುವ ಪರಿಸ್ಥಿತಿ ಇದೆ. ಕೆಲ ದಿನಗಳ ಹಿಂದೆ ನಿಶಾಂತ್ ಎಂಬ ಯುವಕ ನದಿ ನೀರಿಗೆ ಹಾರಿ ಆತ್ಮಹತ್ಯೆಗೈದಾಗ ಸ್ಥಳೀಯ ಈಜುಗಾರರು ಸೇತುವೆಯ ಮೇಲಿಂದ ನದಿಗೆ ಜಿಗಿದು ಯುವಕನ ಪ್ರಾಣ ರಕ್ಷಿಸಲು ಪ್ರಯತ್ನಿಸಿದ್ದರು. ಈ ಸಂದರ್ಭ ಮಾಧ್ಯಮಗಳ ಮುಂದೆ ತಮ್ಮ ಕಾರ್ಯಕ್ಕೆ ನಾಡದೋಣಿ ಹಾಗೂ ಲೈಫ್ ಜಾಕೆಟ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಈ ಬೇಡಿಕೆಗೆ ಸ್ಪಂದಿಸಿದ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ದೋಣಿ ಹಾಗೂ ಲೈಫ್ ಜಾಕೆಟನ್ನು ಕೊಡುಗೆ ನೀಡಿ ಸಾಹಸಿ ಯುವಕರಲ್ಲಿ ಸ್ಫೂರ್ತಿ ತುಂಬುವ ಕಾರ್ಯ ಮಾಡಿದೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ದೋಣಿ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಜಾತಿ, ಧರ್ಮ ನೋಡದೆ ಈ ಈಜುಗಾರರು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಇವರು ತಾಲೂಕಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ. ಇವರ ಸೇವೆ ಮುಂದಿನ ದಿನಗಳಲ್ಲಿಯೂ ತಾಲೂಕಾಡಳಿತ ಹಾಗೂ ಎಲ್ಲರಿಗೂ ಅಗತ್ಯವಿದೆ ಎಂದು ಶುಭ ಹಾರೈಸಿದರು.

ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಲೈಫ್ ಜಾಕೆಟ್ ವಿತರಿಸಿದರು. ಅವರು ಮಾತನಾಡಿ, ಯಾವ ಉದ್ದೇಶಕ್ಕೆ ದೋಣಿಯನ್ನು ನೀಡಲಾಗಿದೆಯೋ ಆ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಸೇವಾಂಜಲಿ ಪ್ರತಿಷ್ಠಾನ ಮಾನವೀಯ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದು ಇನ್ನೂ ಮುಂದುವರಿಯಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಣ ರಕ್ಷಕ ಯುವಕರನ್ನು ಸನ್ಮಾನಿಸಲಾಯಿತು.

ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ವಜ್ರನಾಭ ಶೆಟ್ಟಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಪ್ರಕಾಶ್ ಕಾರಂತ್, ಅಮ್ಮುಂ ೆಗುತ್ತು ದೇವದಾಸ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಾನಂದ ಆಳ್ವ ಕಂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ಪ್ರಾಸ್ತವಿಕವಾಗಿ ಮಾತನಾಡಿದರು. ತೇವು ತಾರಾನಾಥ ಕೊಟ್ಟಾರಿ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News