×
Ad

ಬಸ್‌ಗಳಲ್ಲಿ ಸುರಕ್ಷತಾ ಅಂತರ ಪಾಲಿಸದಿದ್ದಲ್ಲಿ ಪ್ರಕರಣ ದಾಖಲು: ಬಸ್ ಮಾಲಕರ ಸಭೆಯಲ್ಲಿ ಉಡುಪಿ ಡಿಸಿ ಎಚ್ಚರಿಕೆ

Update: 2020-06-11 18:11 IST

ಉಡುಪಿ, ಜೂ.11: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಲ್ಲಿ ನಿಗದಿತ ಸುರಕ್ಷತಾ ಅಂತರ ಪಾಲನೆಯಾಗದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್‌ಗಳ ವಿರುದ್ದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಬಸ್ ಮಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರೋನ ನಿಯಂತ್ರಿಸಲು ಸುರಕ್ಷತಾ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಬಸ್‌ಗಳಲ್ಲಿ ಈ ಅಂತರ ಕಾಯ್ದುಕೊಳ್ಳದೆ ನಿಗದಿತ ಸಂಖ್ಯೆ ಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವ ಕುರಿತಂತೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬರುತ್ತಿವೆ. ಅಂತಹ ಬಸ್‌ಗಳ ವಿರುದ್ದ ಸಾರಿಗೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದೇ, ಎಪಿಡಮಿಕ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಗದೀಶ್, ಈ ಕುರಿತಂತೆ ಸರಕಾರ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಸ್‌ಮಾಲಕರುಗಳಿಗೆ ತಿಳಿಸಿದರು.

ಎಲ್ಲಾ ಬಸ್‌ಗಳಲ್ಲಿ 30ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸದಂತೆ ತಿಳಿಸಿದ ಜಿಲ್ಲಾಧಿಕಾರಿ,ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಎಲ್ಲಾ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡುವಂತೆ ಹಾಗೂ ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಬಸ್ನೊ ಳಗೆ ಪ್ರವೇಶ ನೀಡದಂತೆ ಬಸ್ ಮಾಲಕರಿಗೆ ತಿಳಿಸಿ, ಈ ಬಗ್ಗೆ ತಮ್ಮ ಎಲ್ಲಾ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.

ಬಸ್‌ಗಳಲ್ಲಿ ಅಧಿಕ ಮಂದಿ ಸಂಚರಿಸುವ ಸಮಯದಲ್ಲಿ (ಪೀಕ್ ಟೈಮ್) ಮಾತ್ರ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇದ್ದು, ಉಳಿದಂತೆ ಇತರೆ ಸಮಯ ದಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಪೀಕ್ ಅವರ್ ನಲ್ಲಿ ಸುರಕ್ಷತಾ ಅಂತರ ಪಾಲನೆ ಕಷ್ಟ ಎಂದು ಬಸ್ ಮಾಲಕರು ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಸುರಕ್ಷತಾ ಅಂತರ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ಪೀಕ್ ಅವರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಿಸಿ ಅಥವಾ ನಿಮ್ಮ ಹಂತದಲ್ಲೇ ಟೈಮಿಂಗ್ ಬದಲಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಬಸ್ ದರದ ಹೆಚ್ಚಳ ಕುರಿತಂತೆ, ಯಾವ ಆದೇಶದಂತೆ ಮಾಡಿದ್ದೀರಿ ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ, ಕೊರೋನಾದಿಂದ ಬಸ್ ದರ ಹೆಚ್ಚಳ ಮಾಡಿಲ್ಲ. ಬಸ್‌ದರ ಹೆಚ್ಚಳ ಕುರಿತಂತೆ ಜನವರಿಯಲ್ಲಿಯೇ ಸರಕಾರ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಕೆಎಸ್ಸಾರ್ಟಿಸಿಯಲ್ಲಿ ಹೆಚ್ಚಳವಾಗಿದೆ. ಖಾಸಗಿ ಬಸ್‌ಗಳಿಗೆ ಈಗ ಆದೇಶ ಬಂದ ನಂತರ ರಾಜ್ಯಾದ್ಯಂತ ಹೆಚ್ಚಳ ಮಾಡಲಾಗಿದೆ. ಬಸ್‌ಗಳಲ್ಲಿ 30 ಜನ ಪ್ರಯಾಣಿಕರನ್ನು ಕರೆದು ಕೊಂಡು ಹೋದರೂ, ಉಳಿದ ಖಾಲಿ ಸೀಟುಗಳಿಗೆ ತೆರಿಗೆ ಪಾವತಿಸಬೇಕಿದ್ದು, ಪ್ರಯಾಣಿಕರ ಸಂಖ್ಯೆಗೆ ಮಾತ್ರವೇ ತೆರಿಗೆ ಪಾವತಿ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಬಸ್ ಮಾಲಕು ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಎಎಸ್ಪಿಕುಮಾರ ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕಾರ್ಯದರ್ಶಿ ಸದಾನಂದ ಛಾತ್ರ, ಉಡುಪಿ ಸರ್ವಿಸ್ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಶಿರ್ವ ಬಸ್ ಮಾಲಕರ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News