ಲಂಚ ಪ್ರಕರಣ: ಕೆಐಎಡಿಬಿ ಅಧಿಕಾರಿ ನಿವಾಸದ ಮೇಲೆ ಎಸಿಬಿ ದಾಳಿ
ಮಂಗಳೂರು: ಇಲ್ಲಿನ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡರ ಮಂಡ್ಯದಲ್ಲಿನ ನಿವಾಸದ ಮೇಲೆ ಮಂಗಳೂರು ಎಸಿಬಿ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ.
ದಾಸೇಗೌಡರಿಗೆ ಸೇರಿದ್ದವು ಎನ್ನಲಾದ ಮಂಡ್ಯದಲ್ಲಿನ ನಿವಾಸಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿರುವ ದಾಸೇಗೌಡರ ನಿವಾಸದ ಮೇಲೆಯೂ ದಾಳಿ ನಡೆಸಲು ತಂಡ ಮುಂದಾಗಿತ್ತು. ಆದರೆ ಮನೆಯು ಬೀಗ ಹಾಕಲಾಗಿದ್ದರಿಂದ ದಾಳಿ ನಡೆಸಲಾಗಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಮಂಗಳೂರಿನಲ್ಲಿ ಕಳೆದ ಡಿಸೆಂಬರ್ ನಲ್ಲಿ ಲಕ್ಷಾಂತರ ರೂ. ಲಂಚ ಸ್ವೀಕರಿಸಿದ ಆರೋಪ ಇವರ ಮೇಲಿತ್ತು. ಈ ಮಧ್ಯದಲ್ಲಿ ಗೋಲಿಬಾರ್ ಮತ್ತು ಕೊರೋನ ಲಾಕ್ಡೌನ್ ಇದ್ದಿದ್ದರಿಂದ ಕಾರ್ಯಾಚರಣೆ ಮುಂದೂಡಲಾಗಿತ್ತು. ಸದ್ಯ ಮಂಡ್ಯದಲ್ಲಿ ದಾಸೇಗೌಡರ ವಿಚಾರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಎಸಿಬಿ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.