ಆಳ್ವಾಸ್ ಪುನರ್ಜನ್ಮ : ದುಶ್ಚಟ ಮುಕ್ತರ ಅನುಸರಣ ಕಾರ‍್ಯಕ್ರಮ

Update: 2020-06-15 17:29 GMT

ಮೂಡುಬಿದಿರೆ : ಮದ್ಯ ವ್ಯಸನ ಆರಂಭದಲ್ಲಿ ಸಣ್ಣ ಹವ್ಯಾಸವಾಗಿ ಪ್ರಾರಂಭವಾದದ್ದು ನಂತರ ಚಟವಾಗಿ ಮಾರ್ಪಡುತ್ತದೆ. ಇದರಿಂದಾಗಿ ಮನುಷ್ಯ ತನ್ನ ಸ್ವನಿಯಂತ್ರಣ  ಕಳೆದುಕೊಂಡು ಆರೋಗ್ಯ ಹಾಳುಮಾಡಿಕೊಳ್ಳುವುದಲ್ಲದೇ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಕೊಳ್ಳುತ್ತಾನೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.

ಅವರು ಆಳ್ವಾಸ್ ಹೆಲ್ತ್ ಸೆಂಟರ್ ಸಹಯೋಗದಲ್ಲಿ ‘ಆಳ್ವಾಸ್ ಪುನರ್ಜನ್ಮ : ದುಶ್ಚಟ ಮುಕ್ತರ ಅನುಸರಣ ಕಾರ‍್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಪರಿಸರ, ಒತ್ತಡ, ಹದಗೆಟ್ಟ ಮಾನಸಿಕ ಆರೋಗ್ಯ, ಅನುವಂಶೀಯ ಪ್ರವೃತ್ತಿ, ವಯಸ್ಸು ಇವೆಲ್ಲವೂ ಮಧ್ಯಪಾನಕ್ಕೆ ಕಾರಣ ವಾಗಿರಬಹುದು. ಈ ವ್ಯಸನಕ್ಕೆ ಯೋಗ, ಧ್ಯಾನ, ಪ್ರಾಣಾಯಾಮಗಳ ಮೂಲಕ ಚಿಕಿತ್ಸೆ ನೀಡಿ, ಪುನರ್‌ಜನ್ಮದ ಅನುಭವವನ್ನು ಕಲ್ಪಿಸಿಕೊಡು ವುದು ನಮ್ಮ ಕರ‍್ಯಕ್ರಮದ ಉದ್ದೇಶ.  ಈ ಕಾರ್ಯವನ್ನು ಶ್ರೀ.ಕ್ಷೇ. ಧ, ಗ್ರಾ ಯೋಜನೆಯ ಸಹಕಾರ ಮಾರ್ಗದರ್ಶನದೊಂದಿಗೆ ನಮ್ಮ ತಂಡ ಉತ್ತಮವಾಗಿ ನಿರ್ವಹಿಸುತ್ತಿದೆ. ಈ ಮೂಲಕ ಮತ್ತಷ್ಟು ಮಧ್ಯವ್ಯಸನಿಗಳ ಬಾಳಿಗೆ ಆಸರೆಯಾಗಿ ಅವರನ್ನು ಸಾಮಾಜಿಕವಾಗಿ, ಕೌಟುಂಬಿಕ ವಾಗಿ, ಆರ್ಥಿಕವಾಗಿ ಸದೃಡಗೊಳಿಸುವುದು ಇದರ ಪ್ರಮುಖ ಉದ್ದೇಶ ಎಂದು ಹೇಳಿದರು.

ಮಧ್ಯಪಾನ ಸೇವನೆಯಿಂದ ಭಾರತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೂ ಮಧ್ಯಪಾನ ಒಂದು ರೀತಿಯ ಕಾರಣವಾಗಿದೆ.  ಕುಡಿತದ ಪ್ರಭಾವಕ್ಕೆ ಒಳಗಾಗಿ ತನ್ನ ಸ್ಥಿಮಿತವನ್ನು ಕಳೆದುಕೊಂಡು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾ ಗುತ್ತಾರೆ. ಅಂತಹವರನ್ನು ಸರಿ ದಾರಿಗೆ ತರುವಲ್ಲಿ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮೂಡುಬಿದಿರೆಯ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಹೇಳಿದರು.

ಕಾರ‍್ಯಕ್ರಮದಲ್ಲಿ ಕಳೆದ ಜನವರಿಯಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್ ಸಹಯೋಗದಲ್ಲಿ  ಎರಡು  ಹಂತದಲ್ಲಿ ನಡೆದ  ಮಧ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಚುರಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ, ಪದವಿ ವಿಭಾಗದ ಪ್ರಾಂಶುಪಾಲ ಪ್ರೊ.ಕುರಿಯನ್, ಕೌನ್ಸಿಲರ್ ಸುಮನ್ ಪಿಂಟೋ, ಶ್ರೀ.ಕ್ಷೇ. ಧ, ಗ್ರಾ ಯೋಜನೆಯ ವಿವೇಕ್ ವಿನ್ಸಂಟ್ ಉಪಸ್ಥಿತರಿದ್ದರು. ಕರ‍್ಯಕ್ರಮವನ್ನು ಆಳ್ವಾಸ್ ಪುನರ್‌ಜನ್ಮದ ಮೇಲ್ವಿಚಾರಕರಾದ ರಾಮ್ ಪ್ರಸಾದ್ ರಾವ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News