ಟಿಲ್ಲರ್ ಹಿಮ್ಮುಖವಾಗಿ ಚಲಿಸಿ ಕೃಷಿಕ ಮೃತ್ಯು
Update: 2020-06-18 15:53 GMT
ಗಂಗೊಳ್ಳಿ, ಜೂ.18: ಗದ್ದೆಯಲ್ಲಿ ಉಳುಮೆ ಮಾಡುತ್ತಿರುವಾಗ ಟಿಲ್ಲರ್ ಹಿಮ್ಮುಖವಾಗಿ ಮೈಮೇಲೆ ಚಲಿಸಿದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ನಾಡ ಗ್ರಾಮದ ಕೋಣ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಆಲೂರು ಗ್ರಾಮದ ತಾರಿಬೇರುವಿನ ಉದಯ ಪೂಜಾರಿ(34) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಇವರು ಜೂ.16ರಂದು ಬೆಳಗ್ಗೆ ಕೋಣ್ಕಿಯ ರಘು ಶೆಟ್ಟಿ ಎಂಬವರ ಗದ್ದೆಯನ್ನು ಟಿಲ್ಲರ್ನಲ್ಲಿ ಉಳುಮೆ ಮಾಡು ತ್ತಿದ್ದರು. ಈ ವೇಳೆ ಟಿಲ್ಲರನ್ನು ತಿರುಗಿಸುವಾಗ ಇವರ ಕಾಲು ಗದ್ದೆಯ ಕೆಸರಿನಲ್ಲಿ ಹುಗಿದು, ಗದ್ದೆಯಲ್ಲಿಯೇ ಬಿದ್ದರು. ಆಗ ಟಿಲ್ಲರ್ ಹಿಮ್ಮುಖವಾಗಿ ಅವರ ಮೈ ಮೇಲೆ ಚಲಿಸಿದ ಪರಿಣಾಮ ಉದಯ ಪೂಜಾರಿ, ಕಾಲು ಹಾಗೂ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯಗಳಾದವು.
ಮಣಿಪಾಲ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದ ಇವರು ಜೂ.17ರಂದು ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.