×
Ad

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 11 ಮಂದಿಗೆ ಕೊರೋನ ಪಾಸಿಟಿವ್

Update: 2020-06-19 20:27 IST

ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಗೆ ನಿನ್ನೆಯಷ್ಟೇ ಮುಂಬೈಯಿಂದ ಕುಟುಂಬ ಸಮೇತ ಬಂದಿದ್ದ 54 ವರ್ಷ ಪ್ರಾಯದ ಪುರುಷರೊಬ್ಬರು ಕೋವಿಡ್-19ಕ್ಕೆ ಬಲಿಯಾದರೆ, ಇಂದು ಒಟ್ಟು 11 ಮಂದಿ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್‌ಗೆ ಇಬ್ಬರು ಬಲಿಯಾದಂತಾಗಿದೆ. ಇಬ್ಬರೂ ಮುಂಬೈಯಿಂದ ಬಂದವರಾ ಗಿದ್ದಾರೆ. ಬೈಂದೂರು ತಾಲೂಕಿನ 54 ವರ್ಷ ಪ್ರಾಯದ ಪುರುಷರು ಮೇ 14ರಂದು ಮಣಿಪಾಲ ಕೆಎಂಸಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಬಳಿಕ ಅವರಲ್ಲಿ ಸೋಂಕು ಪತ್ತೆಯಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ನಿನ್ನೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿ ರಲಿಲ್ಲ. ಆದರೆ ಇಂದು 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಉಡುಪಿ ತಾಲೂಕಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ನಾಲ್ವರು ಮಹಾರಾಷ್ಟ್ರದಿಂದ ಬಂದವರಾದರೆ, ಇಬ್ಬರು ತಮಿಳುನಾಡಿನಿಂದ ಬಂದವರು. ಮೂವರು ಮಹಾರಾಷ್ಟ್ರದಿಂದ ಬಂದು ಜೂ.15ರಂದು ಪಾಸಿಟಿವ್ ಪತ್ತೆಯಾದ 51ರ ಹರೆಯದ ಮಹಿಳೆಯ (7024) ಸಂಪರ್ಕಕ್ಕೆ ಬಂದವರಾದರೆ, ಇಬ್ಬರು ಮಹಾರಾಷ್ಟ್ರದಿಂದಲೇ ಬಂದು ಜೂ.16ರಂದು ಪಾಸಿಟಿವ್ ಕಾಣಿಸಿಕೊಂಡ 63 ವರ್ಷ ಪ್ರಾಯದ ಪುರುಷರ (7291) ಸಂಪರ್ಕಕ್ಕೆ ಬಂದವರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಇಂದು ಸೋಂಕು ಪತ್ತೆಯಾದವರಲ್ಲಿ ಐವರು ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು 10 ವರ್ಷ ಪ್ರಾಯದೊಳಗಿನ ಬಾಲಕಿಯರು ಸೇರಿದ್ದಾರೆ.

ಇಂದಿನ 11 ಪಾಸಿಟಿವ್ ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಬಂದ ಒಟ್ಟು ಪ್ರಕರಣಗಳ ಸಂಖ್ಯೆ 1050ಕ್ಕೇರಿದ್ದು ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇಂದು 52 ಪಾಸಿಟಿವ್ ಬಂದ ಕಲಬುರಗಿ ಈಗಲೂ ಒಟ್ಟು 1126 ಕೇಸುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಿನದಲ್ಲಿ ಅತ್ಯಧಿಕ 138 ಕೇಸುಗಳಿಂದ ಒಟ್ಟು 982 ಪ್ರಕರಣಗಳಿರುವ ಬೆಂಗಳೂರು ನಗರ ಮೂರನೇ ಸ್ಥಾನಕ್ಕೇರಿದೆ. ಯಾದಗಿರಿ 877 ಕೇಸು ಗಳೊಂದಿಗೆ 4ನೆ ಸ್ಥಾನದಲ್ಲಿದೆ.

4ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶುಕ್ರವಾರ ಸೋಂಕಿನಿಂದ ಗುಣಮುಖ ರಾದ ನಾಲ್ವರು ಸೇರಿದಂತೆ ಒಟ್ಟು 950 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಇದೀಗ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಕೇವಲ 99 ಮಂದಿ ಮಾತ್ರ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

43 ನೆಗೆಟಿವ್: ಶುಕ್ರವಾರ 11 ಪಾಸಿಟಿವ್ ಕೇಸುಗಳೊಂದಿಗೆ 43 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿ ಬಂದಿವೆ. ಇಂದು ಒಟ್ಟು 87 ಮಂದಿಯ ಗಂಟಲು ದ್ರವ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 17 ಮಂದಿ, ಕೋವಿಡ್ ಸಂಪರ್ಕಿತರು 10 ಮಂದಿ, ಶೀತಜ್ವರದಿಂದ ಬಳಲುವ 11 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್ ಪ್ರದೇಶಗಳಿಂದ ಬಂದ 49 ಮಂದಿಯ ಸ್ಯಾಂಪಲ್ ಗಳಿವೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 13,227 ಕ್ಕೇರಿದೆ. ಇವುಗಳಲ್ಲಿ ಈವರೆಗೆ 11,946 ನೆಗೆಟಿವ್, 1050 ಸ್ಯಾಂಪಲ್ ಪಾಸಿಟಿವ್ ಆಗಿವೆ. ಇನ್ನು ಒಟ್ಟು 231 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಗುರುವಾರ 10 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾ ಗಿದೆ. ಇವರಲ್ಲಿ ತಲಾ ನಾಲ್ಕು ಮಂದಿ ಕೋವಿಡ್ ಸಂಪರ್ಕಿತರು ಹಾಗೂ ಉಸಿರಾಟ ತೊಂದರೆಯವರಿದ್ದರೆ, ಇಬ್ಬರು ಶೀತಜ್ವರದಿಂದ ಬಳಲುತಿದ್ದಾರೆ ಎಂದರು.

ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 18 ಮಂದಿ ಬಿಡುಗಡೆಗೊಂಡಿದ್ದು, 68 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 15 ಮಂದಿ ಸೇರಿದಂತೆ ಒಟ್ಟು 5681 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 749 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ‌ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News