ಬ್ರಹ್ಮಾವರ: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು; ಉದ್ಯಮಿ ಮೃತ್ಯು, ಯುವತಿ ಗಂಭೀರ

Update: 2020-06-21 16:09 GMT

ಬ್ರಹ್ಮಾವರ, ಜೂ.21: ಕಾರೊಂದು ನಿಯಂತ್ರಣ ತಪ್ಪಿ ಬಾರಕೂರು ರಸ್ತೆ ಬದಿಯ ಇತಿಹಾಸ ಪ್ರಸಿದ್ಧ ಚೌಳಿಕೆರೆಗೆ ಬಿದ್ದ ಪರಿಣಾಮ ಉದ್ಯಮಿಯೊಬ್ಬರು ಮೃತಪಟ್ಟು, ಯುವತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 2.30 ಸುಮಾರಿಗೆ ನಡೆದಿದೆ.

ಮೃತರನ್ನು ಬೀಜಾಡಿಯ ಶ್ರೀಲಕ್ಷ್ಮೀ ಗ್ಲಾಸ್ ಹೆಸರಿನ ಗ್ಲಾಸ್ ಮತ್ತು ಫ್ಲೈವುಡ್ ಅಂಗಡಿಯ ಮಾಲಕ, ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ವಕ್ವಾಡಿಯ ಶ್ವೇತಾ(23) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ, ಸಂತೋಷ್ ಶೆಟ್ಟಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

                (ಸಂತೋಷ್ ಶೆಟ್ಟಿ)

ಬಾರಕೂರು ಕಡೆಯಿಂದ ಸಾಬರಕಟ್ಟೆ ಕಡೆ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ಕಾರು ಕೆರೆಯ ನೀರಿನಲ್ಲಿ ಮುಳುಗಿತ್ತೆನ್ನಲಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಇವರಿಬ್ಬರು ಉಸಿರುಗಟ್ಟಿ ಗಂಭೀರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ.

ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಇವರಿಬ್ಬರನ್ನು ಹೊರಗಡೆ ತಂದು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಂತೋಷ್ ಶೆಟ್ಟಿ ಮೃತಪಟ್ಟರೆನ್ನಲಾಗಿದೆ. ಸಂತೋಷ್ ಶೆಟ್ಟಿ ಅವರಿಗೆ ನಾಲ್ಕು ವರ್ಷದ ಮಗುವಿದ್ದು, ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News