ಶಿರ್ವ: ಅಸಹಾಯಕ ಬಾಲಕಿಯ ರಕ್ಷಣೆ
Update: 2020-06-21 16:32 GMT
ಶಿರ್ವ, ಜೂ.21: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸಹಾಯಕ ನೊಂದ ಬಾಲಕಿಯನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ ಘಟನೆ ಜೂ.20ರಂದು ರಾತ್ರಿ ನಡೆದಿದೆ.
ಬಾಲಕಿಯು ಅಸಹಾಯಕಳಾಗಿ, ಒಬ್ಬಂಟಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಇರುವುದರ ಬಗ್ಗೆ ಮಹಿಳೆಯೊಬ್ಬರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಗಮನಕ್ಕೆ ತಂಂದರು. ವಿಷಯ ತಿಳಿದ ವಿಶು ಶೆಟ್ಟಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಹಾಗೂ ಮಹಿಳಾ ಠಾಣಾ ಎಎಸ್ಸೈ ಮುಕ್ತಾ ಮತ್ತು ಸಿಬ್ಬಂದಿ ಪವಿತ್ರ ಜೊತೆ ಬಾಲಕಿ ಇರುವ ಸ್ಥಳಕ್ಕೆ ತೆರಳಿದರು.
ಬಳಿಕ ಬಾಲಕಿಗೆ ಧೈರ್ಯ ನೀಡಿ, ಸಮಾಲೋಚನೆ ನಡೆಸಲಾಯಿತು. ಅಲ್ಲಿಂದ ಕರೆದುಕೊಂಡು ಬಂದು ಬಾಲಕಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಮೂಲಕ ರಕ್ಷಣೆ ಮಾಡಲಾಯಿತು. ಬಾಲಕಿಯ ತಂದೆ ತಾಯಿ ತೀರಿಕೊಂಡಿದ್ದಾರೆ. ಶಿರ್ವ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು.