ಹೂಹಾಕುವಕಲ್ಲು: ಟ್ರ್ಯಾಕ್ಟರ್ ನಡಿಗೆ ಸಿಲುಕಿ ಬೈಕ್ ಸವಾರ ಮೃತ್ಯು

Update: 2020-06-22 09:09 GMT

ಕೊಣಾಜೆ, ಜೂ.22: ಬೈಕ್ ಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಟ್ರ್ಯಾಕ್ಟರ್ ನಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಹಾಕುವಕಲ್ಲು ಪುಣ್ಯಕೋಟಿ ನಗರದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಬೈಕ್ ಸವಾರ ಅದೇ ಟ್ರ್ಯಾಕ್ಟರ್ ಚಾಲಕನಾಗಿದ್ದು, ಸೋಮವಾರ ರಜೆ ತೆಗೆದುಕೊಂಡಿದ್ದು ಬದಲಿ ಚಾಲಕನನ್ನು  ಕರೆಸಿಕೊಂಡಿದ್ದರು. ಪುಣ್ಯಕೋಟಿ ನಗರದ ಬಳಿಯ ಮನೆಯೊಂದರ ರಸ್ತೆ ಅಗೆಯುವ ಕೆಲಸ ನಿರ್ವಹಿಸಿದ ಬದಲಿ ಚಾಲಕ ಒಳರಸ್ತೆಯಿಂದ ಮುಡಿಪು-ಮಂಜನಾಡಿ ಸಂಪರ್ಕ ರಸ್ತೆಗೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಂತೆಯೇ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿದೆಯೆನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು, ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಬೈಕ್ ಸವಾರನ‌ ತಲೆಯ ಮೇಲೆ ಚಲಿಸಿದ್ದು ಬೈಕ್ ಸವಾರ ದಾರುಣ ಸಾವನ್ನಪ್ಪಿದ್ದಾರೆ.

ಕೊಣಾಜೆ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತ ಬೈಕ್ ಸವಾರನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News