×
Ad

ಕರೋನಾ ಮುಂಜಾಗ್ರತಾ ಕ್ರಮದ ಮಾರ್ಗಸೂಚಿ ಜಾರಿ: ಉಡುಪಿ ಲೋಕಾಯುಕ್ತ ತಂಡದಿಂದ ಪರಿಶೀಲನೆ

Update: 2020-06-22 21:05 IST

ಉಡುಪಿ, ಜೂ.22: ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಡಿವೈಎಸ್ಪಿ ಭಾಸ್ಕರ ಬಿ. ಇವರ ನೇತೃತ್ವದ ಲೋಕಾಯುಕ್ತ ತಂಡ ಸೋಮವಾರ, ಉಡುಪಿ ನಗರ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸರಕಾರಿ ಕಚೇರಿ, ಇಲಾಖೆ ಗಳಲ್ಲಿ ಕೇಂದ್ರ/ರಾಜ್ಯ ಸರಕಾರದ ಮಾರ್ಗಸೂಚಿಗಳ ನಿಯಮ ಪಾಲಿಸಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿತು.

ಉಡುಪಿ ನಗರಸಭೆ, ಉಡುಪಿ ತಾಲೂಕು ಕಚೇರಿ, ಉಪನೋಂದಣಿ ಅಧಿಕಾರಿ ಕಛೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಉಡುಪಿ, ಪ್ರಾದೇಶಿಕ ಸಾರಿಗೆ ಕಚೇರಿ ಅಲ್ಲದೇ, ಇತರೆ ಕಚೇರಿಗಳು, ಹೊಟೇಲ್ ಮತ್ತು, ಮಳಿಗೆಗಳಿಗೆ ಕೂಡಾ ಭೇಟಿ ನೀಡಿ ಸಾಮಾಜಿಕ ಅಂತರ ಪರಿಸ್ಥಿತಿ, ಮಾಸ್ಕ್ ಧಾರಣೆ ನಿಯಮ ಪಾಲನೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಹಾಗೂ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಗಳ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನಗಳನ್ನು ತಂಡ ನೀಡಿತು.

ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳು, ಕಚೇರಿಗೆ ಬರುವ ಸಾರ್ವಜನಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಅವರ ಹೆಸರು ದೂರವಾಣಿ ಸಂಖ್ಯೆಯನ್ನು ನೊಂದಣಿ ಪುಸ್ತಕದಲ್ಲಿ ದಾಖಲಿಸಬೇಕು. ಸ್ಯಾನಿಟೈಸರ್ ಇರಿಸಬೇಕು. ಮೇಲುಸ್ತುವಾರಿಗೆ ಒಬ್ಬರು ಅಧಿಕಾರಿಯನ್ನು ನಿಯೋಜಿಸಬೇಕು ಎಂಬುದಾಗಿ ನಿಯಮದಲ್ಲಿದೆ. ಆದರೆ ಸರಕಾರಿ ಕಛೇರಿಗಳಿಗೆ ಭೇಟಿ ನೀಡಿದ ಸಂದರ್ಭ ಇವುಗಳು ಪಾಲನೆಯಾಗದಿರುವುದನ್ನು ತಂಡ ಗುರುತಿಸಿತು.ಕೆಲವೆಡೆ ಸ್ಯಾನಿಟೈಸರ್ ಮಾತ್ರ ಬಳಕೆಯಾಗುತ್ತಿದ್ದು, ಥರ್ಮಲ್ ಸ್ಕ್ರೀನಿಂಗ್ ಬಳಕೆ ಮಾಡದಿರುವುದು ಮತ್ತು ನೊಂದಣಿ ಪ್ರಕ್ರಿಯೆ ಸಮರ್ಪಕವಾಗಿ ಆಗದಿ ರುವುದನ್ನು ಕಂಡ ಲೋಕಾಯುಕ್ತ ಪೊಲೀಸ್ ತಂಡ ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಕಛೇರಿಗೆ ಬರುವ ಎಲ್ಲಾ ಸಾರ್ವಜನಿಕರ ನೊಂದಣಿ ಕಡ್ಡಾಯಗೊಳಿಸುವಂತೆ ಸೂಚಿಸಿತು.

ಪರಿಶೀಲನೆ ವೇಳೆ ಕೋವಿಡ್-19ರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಗಳು ಸಮಪರ್ಕವಾಗಿ ಪಾಲನೆಯಾಗದಿರು ವುದು ಕಂಡು ಬಂದಿದೆ. ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇವುಗಳನ್ನು ಎಲ್ಲರೂ ಸಮರ್ಪಕವಾಗಿ ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ರಾಜ್ಯ/ಕೇಂದ್ರ ಸರಕಾರದ ಮಾರ್ಗ ಸೂಚಿಗಳ ಪ್ರಕಾರ ನಿಯಮ ಪಾಲಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಯಿತು.

ಇದೇ ವೇಳೆ ವಾಣಿಜ್ಯ ಮಳಿಗೆ/ಮಾರುಕಟ್ಟೆ/ಹೊಟೇಲ್‌ಗಳಲ್ಲಿ ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ನಡೆಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇರುವುದು ಕಂಡು ಬಂದಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಭಾಸ್ಕರ ಬಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News