×
Ad

ಉಡುಪಿ ಜಿಲ್ಲೆಯಲ್ಲಿ ಇಂದು 14 ಮಂದಿಗೆ ಕೊರೋನ ಸೋಂಕು

Update: 2020-06-24 20:31 IST

ಉಡುಪಿ, ಜೂ.24: ಉಡುಪಿಯ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 14 ಮಂದಿ ಬುಧವಾರ ಜಿಲ್ಲೆಯಿಂದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಸೇರಿದ್ದು, ಇವರೆಲ್ಲರ ಗಂಟಲು ದ್ರವ ಮಾದರಿ ಸೋಂಕಿಗೆ ಪಾಸಿಟಿವ್ ಆಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೊರೋನ ವೈರಸ್‌ಗೆ ಪಾಸಿಟಿವ್ ಆದ 14 ಮಂದಿಯಲ್ಲಿ ಒಂಭತ್ತು ಮಂದಿ ಮಹಾರಾಷ್ಟ್ರದಿಂದ ಬಂದವರು. ನಾಲ್ವರು ಉಡುಪಿಯವರಾದರೆ ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಇವರಲ್ಲಿ ಏಳು ಮಂದಿ ಪುರುಷರು, ಆರು ಮಂದಿ ಮಹಿಳೆಯರು ಹಾಗೂ ಮೂರು ವರ್ಷ ಪ್ರಾಯದ ಒಬ್ಬ ಬಾಲಕ ಸೇರಿದ್ದಾರೆ. 60 ವರ್ಷ ಪ್ರಾಯದ ಮೇಲಿನ ಇಬ್ಬರು ಸಹ ಇವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

14 ಮಂದಿಯಲ್ಲಿ 9 ಮಂದಿ ಕಾರ್ಕಳ ತಾಲೂಕಿನವರಾದರೆ, ಐವರು ಉಡುಪಿಯವರು. ಉಡುಪಿಯ 38, 40 ಹಾಗೂ 50 ವರ್ಷದ ಮೂವರು ಮಹಿಳೆಯರು, ಮುಂಬೈಯಿಂದ ಬಂದು ಜೂ. 3ರಂದು ಪಾಸಿಟಿವ್ ಬಂದ 63 ವರ್ಷ ಪ್ರಾಯದ ಪುರುಷರ ಸಂಪರ್ಕಕ್ಕೆ ಬಂದವರಾಗಿದ್ದಾರೆ. 32 ವರ್ಷ ಪ್ರಾಯದ ಮಹಿಳೆಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಓ ಹೇಳಿದರು.

ಇಂದು ಬಂದ 14 ಪಾಸಿಟಿವ್‌ಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 1102ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಗರ 1678 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ 1254 ಪ್ರಕರಣಗಳೊಂದಿಗೆ ಕಲಬುರಗಿ ಎರಡನೇ ಸ್ಥಾನದಲ್ಲಿದೆ. ಯಾದಗಿರಿ 907 ಕೇಸುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

9 ಮಂದಿ ಬಿಡುಗಡೆ: ಇಂದು ಒಟ್ಟು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಒಟ್ಟು 9 ಮಂದಿ ಸೋಂಕಿತರು ರೋಗದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆ ಯಿಂದ ಐದು ಮಂದಿ, ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ಮೂವರು ಹಾಗೂ ಕಾರ್ಕಳದ ಸರಕಾರಿ ಆಸ್ಪತ್ರೆಯಿಂದ ಒಬ್ಬರು ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 987 ಮಂದಿ ಬಿಡುಗಡೆ ಗೊಂಡಿದ್ದು, ಒಟ್ಟು 113 ಮಂದಿ ಈಗಲೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ. ಸೂಡ ವಿವರಿಸಿದರು.

107 ಸ್ಯಾಂಪಲ್ ಸಂಗ್ರಹ: ಬುಧವಾರ 14 ಪಾಸಿಟಿವ್ ಕೇಸುಗಳೊಂದಿಗೆ 51 ಮಂದಿಯ ಗಂಟಲುದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಬುಧವಾರ ಇನ್ನೂ ಒಟ್ಟು 107 ಮಂದಿಯ ಗಂಟಲುದ್ರವದ ಸ್ಯಾಂಪಲ್ ಗಳನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 7, ಕೋವಿಡ್ ಸಂಪರ್ಕಿತರು 29, ಶೀತಜ್ವರದಿಂದ ಬಳಲುವ 22 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 49 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದರು.

ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 13,733ಕ್ಕೇರಿದೆ. ಇವುಗಳಲ್ಲಿ ಈವರೆಗೆ 12,233 ನೆಗೆಟಿವ್, 1102 ಪಾಸಿಟಿವ್ ಆಗಿವೆ. ಇನ್ನು ಒಟ್ಟು 398 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಮಂಗಳವಾರ 8 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಉಸಿರಾಟ ತೊಂದರೆಯವರು 5 ಹಾಗೂ ಶೀತಜ್ವರದಿಂದ ಬಳಲುವ 3 ಮಂದಿ ಇದ್ದಾರೆ.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 10 ಮಂದಿ ಬಿಡುಗಡೆಗೊಂಡಿದ್ದು, 78 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 14 ಮಂದಿ ಸೇರಿದಂತೆ ಒಟ್ಟು 5759 ಮಂದಿಯನ್ನು ಕೊರೋನ ತಪಾಸಣೆಗೆ ಈವರೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 687 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ‌ಚಂದ್ರ ಸೂಡ ಹೇಳಿದರು.

ಕೆಎಂಸಿ ನರ್ಸ್‌ಗೆ ಸೋಂಕು

ಮಣಿಪಾಲ ಕೆಎಂಸಿಯಲ್ಲಿ ಸ್ಟಾಫ್ ನರ್ಸ್ ಆಗಿರುವ ಶಿರ್ವ ಮಾಣಿಬೆಟ್ಟಿನ 32ರ ಹರೆಯದ ಮಹಿಳೆಯೊಬ್ಬರು ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಅವರಿಗೆ ಈ ಸೋಂಕು ತಗಲಿರಬಹುದು ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದ್ದಾರೆ.

ಅವರನ್ನು ಚಿಕಿತ್ಸೆಗಾಗಿ ಈಗಾಗಲೇ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮನೆಯನ್ನು ಕಾಪು ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಸೀಲ್‌ಡೌನ್ ಮಾಡಿದ್ದಾರೆ. ಅವರಿಗೆ ಈಗಾಗಲೇ 65 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ ಎಂದವರು ಹೇಳಿದರು.

ಅದೇ ರೀತಿ ಉಡುಪಿ ಮಣಿಪುರದ 38, 40 ಹಾಗೂ 50 ವರ್ಷ ಪ್ರಾಯದ ಮೂವರು ಮಹಿಳೆಯರು ಪಾಸಿಟಿವ್ ಬಂದವರಲ್ಲಿ ಸೇರಿದ್ದು, ಇವರಿಗೆ ಜೂ.7ರಂದು ಪಾಸಿಟಿವ್ ಬಂದ ಇದೇ ಊರಿನ ಲ್ಯಾಬ್ ಟೆಕ್ನಿಷಿಯನ್‌ಗೆ ನಿಕಟ ಸಂಬಂಧವಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News