×
Ad

ಡಿಸೆಂಬರ್ ಅಂತ್ಯದೊಳಗೆ ಎಲ್ಲ ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ : ಉಡುಪಿ ಜಿಪಂ ಸಿಇಒ

Update: 2020-06-24 21:02 IST

ಉಡುಪಿ, ಜೂ. 24: ಜಿಲ್ಲೆಯ ಎಲ್ಲ 158 ಗ್ರಾಮ ಪಂಚಾಯತ್‌ಗಳಲ್ಲಿ 2020ರ ಡಿಸೆಂಬರ್ ತಿಂಗಳೊಳಗೆ ಎಸ್.ಎಲ್.ಆರ್.ಎಂ. ಘಟಕಗಳನ್ನು ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸುವ ಗುರಿ ಹೊಂದಲಾಗಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 65ರಿಂದ 70 ಗ್ರಾಪಂಗಳಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳನ್ನು ಆರಂಭಿಸಲಾಗಿದ್ದು, ಅದರಲ್ಲಿ ಕೆಲವೊಂದು ಘಟಕಗಳು ಕಸ ವಿಲೇವಾರಿಯಲ್ಲಿ ಬರುವ ಆದಾಯದಿಂದಲೇ ತಮ್ಮ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿಕೊಂಡು ಸ್ವಾವಲಂಬನೆ ಸಾಧಿಸಿವೆ. ಹಸಿ ಕಸ ಸಂಗ್ರಹಣೆ ನಿಲ್ಲಿಸಿ, ಒಣ ಕಸ ಮಾತ್ರ ಸಂಗ್ರಹಿಸಲಾಗುತ್ತಿದೆ. ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಬಗ್ಗೆ ಅರಿವು ಮೂಡಿಸಲಾಗಿದೆ.

ಒಣ ಕಸ ಸಂಗ್ರಹಕ್ಕೆ ಗ್ರಾಪಂಗಳಲ್ಲಿ 20ರಿಂದ 60 ರೂ.ಗಳವರೆಗೆ ಮಾಸಿಕ ದರ ವಸೂಲಿ ಮಾಡಲಾಗುತ್ತಿದೆ. ಈ ದರವನ್ನು ಆಯಾ ಗ್ರಾಪಂ ಗಳೇ ನಿರ್ಧರಿಸುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಂಡ ವಿಧಿಸುವ ಅಧಿಕಾರ ಗ್ರಾಪಂಗಳಿಗಿದ್ದು, ಈಗಾಗಲೇ ಹಲವು ಗ್ರಾಪಂಗಳಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಸಿಇಓ ತಿಳಿಸಿದ್ದಾರೆ.

ಘಟಕ ಸ್ಥಾಪನೆಗೆ ಎಲ್ಲ ಗ್ರಾಪಂಗಳಿಗೆ ಕಂದಾಯ ಇಲಾಖೆ ಮೂಲಕ ಜಾಗ ನೀಡಲಾಗುತ್ತಿದ್ದು, ಈಗಾಗಲೇ 110 ಗ್ರಾಪಂಗಳಿಗೆ ಜಾಗ ನೀಡಲಾ ಗಿದೆ. ಉಳಿದ ಗ್ರಾಪಂಗಳಿಗೆ ಜಾಗ ನೀಡುವ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. ಘಟಕಗಳಲ್ಲಿ ಒಣಕಸ ಮಾತ್ರ ಸಂಗ್ರಹವಾಗುತ್ತಿದ್ದು, ಘಟಕ ಸ್ಥಾಪನೆಯಿಂದ ಸಾರ್ವಜನಿಕರಿಗೆ ಯಾವುದೇ ದುರ್ವಾಸನೆ ಅಥವಾ ಆರೋಗ್ಯಕ್ಕೆ ತೊಂದರೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆ ಈಗಾಗಲೇ ಜಾರಿಯಾಗಿದ್ದು, ಅಲೆವೂರು ಮತ್ತು ಮರವಂತೆಯಲ್ಲಿ 300 ಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಪಂನಲ್ಲೂ ಈ ರೀತಿ ರಸ್ತೆ ನಿರ್ಮಿಸುವ ಯೋಜನೆ ಹೊಂದಲಾಗಿದೆ. ಪ್ಲಾಸ್ಟಿಕ್‌ನ್ನು ಪುಡಿ ಮಾಡುವ ಯಂತ್ರವನ್ನೂ ಸಹ ಖರೀದಿ ಸಿದ್ದು, 3 ತಾಲೂಕುಗಳಿಗೆ ಒಂದು ಯಂತ್ರವನ್ನು ನೀಡಲಾಗಿದೆ. ಗ್ರಾಪಂಗಳು ತಮ್ಮಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ನ್ನು ಇಲ್ಲಿ ಪುಡಿ ಮಾಡಿಸಬಹುದು ಎಂದು ಸಿಇಓ ತಿಳಿಸಿದರು.

ಘಟಕದಲ್ಲಿ ಪದವೀಧರರೂ ಉದ್ಯೋಗಿ

ಪ್ರಸ್ತುತ ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಸುಮಾರು 500 ನೌಕರರು ಈ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುತ್ತಿದೆ. ಕೊರೋನ ಮುಂಜಾಗ್ರತಾ ಕ್ರಮ ವಾಗಿ ಸ್ಯಾನಿಟೈಸರ್, ಸಾಬೂನು, ಮಾಸ್ಕ್, ಗ್ಲೌಸ್, ಏಪ್ರಾನ್, ಪೇಸ್ ಶೀಲ್ಡ್ ಇತ್ಯಾದಿ ಹೊಂದಿರುವ 4,000ರೂ. ವೌಲ್ಯದ ಕಿಟ್ ವಿತರಿಸಲಾ ಗಿದೆ. ಘಟಕದಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರೂ ಉದ್ಯೋಗಿಗಳಾಗಿದ್ದಾರೆ. ಎಲ್ಲ ಗ್ರಾಪಂಗಳಲ್ಲಿ ಘಟಕಗಳು ಆರಂಭವಾದ ಬಳಿಕ ಇನ್ನೂ ಹೆಚ್ಚಿನ ಉದ್ಯೋಗವಕಾಶ ಸೃಷ್ಠಿಯಾಗ ಲಿದೆ ಎಂದು ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಘಟಕದಿಂದ ಲಕ್ಷಾಂತರ ರೂ. ಆದಾಯ

ವಂಡ್ಸೆ, ಹಂಗಳೂರು, ಸಿದ್ದಾಪುರ, ಮರವಂತೆ, ಕಾಡೂರು, 80 ಬಡಗ ಬೆಟ್ಟು, ಹೆಜಮಾಡಿ, ವರಂಗ, ಎರ್ಲಪಾಡಿ, ನಿಟ್ಟೆ, ಮುಂಡ್ಕೂರು, ಮುಡೂರು ಗ್ರಾಪಂಗಳಲ್ಲಿ ಕಸ ನಿರ್ವಹಣೆ ಖರ್ಚು ತೆಗೆದು ಉಳಿಕೆಯಾಗುವ ಹಂತದಲ್ಲಿದೆ. ಇಲ್ಲಿ ಕೆಲಸಗಾರರ ವೇತನ ಎಸ್‌ಎಲ್‌ಆರ್‌ಎಂ ಘಟಕದಿಂದಲೇ ನಡೆಯುತ್ತಿದೆ. ಕೊಕ್ಕರ್ಣೆ, ಪಡುಬಿದ್ರಿ, ಬಸ್ರೂರು ಮೊದಲಾದ ಗ್ರಾಪಂಗಳಲ್ಲಿ ಘಟಕವು ಗ್ರಾಪಂಗೆ ಯಾವುದೇ ಖರ್ಚಿಲ್ಲದೆ ನಡೆಯುತ್ತಿದೆ.

ಬಸ್ರೂರಿನಲ್ಲಿ ವಾರ್ಷಿಕ ಆದಾಯ 4.64 ಲಕ್ಷ ರೂ., ವಂಡ್ಸೆಯಲ್ಲಿ ತಿಂಗಳ ಆದಾಯ 1.15 ಲಕ್ಷ ರೂ., ಕಾಡೂರಿನಲ್ಲಿ ವಾರ್ಷಿಕ ವ್ಯವಹಾರ 2.52 ಲಕ್ಷ ರೂ., ಸಿದ್ದಾಪುರದಲ್ಲಿ 4.66 ಲಕ್ಷ ರೂ., ಹಂಗಳೂರಿನಲ್ಲಿ 2.24 ಲಕ್ಷ ರೂ., 80 ಬಡಗಬೆಟ್ಟುವಿನಲ್ಲಿ 21 ಲಕ್ಷ ರೂ., ಹೆಜಮಾಡಿಯಲ್ಲಿ 11.49 ಲ.ರೂ. ಇದೆ. ಜಿಲ್ಲೆಯ ಅತಿ ಹೆಚ್ಚು ವ್ಯವಹಾರ ಕುದುರಿಸುವ 80 ಬಡಗಬೆಟ್ಟು ಗ್ರಾಪಂ ನಲ್ಲಿ 10-12 ಮಂದಿ ಕೆಲಸಕ್ಕಿದ್ದು 12 ಲ.ರೂ. ಬಳಕೆದಾರರ ಶುಲ್ಕದಿಂದ, 5.65 ಲ.ರೂ. ಕಸಗಳ ಮಾರಾಟದಿಂದ ಬರುತ್ತಿದೆ. ಸಿದ್ದಾಪುರದಲ್ಲಿ 3.63 ಲ.ರೂ. ಶುಲ್ಕದಿಂದ, 70,000 ರೂ. ಕಸ ಮಾರಾಟದಿಂದ ಆದಾಯ ಸಂಗ್ರಹವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News