ಜು.1ರಿಂದ ವಿವೇಕಾನಂದ ಕಾಲೇಜ್‍ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

Update: 2020-06-24 16:29 GMT

ಪುತ್ತೂರು : ಮಂಗಳೂರು ವಿಭಾಗ ಗ್ರಾಮವಿಕಾಸ ಸಮಿತಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ, ದ.ಕ. ಜಿಲ್ಲಾ ಸಹಕಾರಿ ಭಾರತಿಯ ವತಿಯಿಂದ ಜು. 1ರಿಂದ 6ರವರೆಗೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗ್ರಾಮ ವಿಕಾಸ ಸಮಿತಿಯ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ತಿಳಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿಬಿರವನ್ನು ಜು. 1ರಂದು ಬೆಳಗ್ಗೆ ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಕಡ್ಕ ಪ್ರಭಾಕರ ಭಟ್ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ ಗೋಪಾಲ್ ಚೆಟ್ಟಿಯಾರ್ ಪ್ರಧಾನ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.

ನೆಲಹಾಸು, ಕ್ಲಬಿಂಗ್ ಮತ್ತು ಎಲೆಕ್ಟ್ರಿಷಿಯನ್ ವರ್ಕ್, ವಿದ್ಯುತ್ ಉಪಕರಣಗಳ ತರಬೇತಿ, ಹೈನುಗಾರಿಕೆ ತರಬೇತಿ, ತೆಂಗು, ಅಡಿಕೆ ಮರ ಏರುವ ತರಬೇತಿ, ಫ್ಯಾಬ್ರಿಕೇಶನ್ ಕೆಲಸದ ತರಬೇತಿ, ಫುಡ್ ಟೆಕ್ನಾಲಜಿ, ಫ್ಯಾಶನ್ ಡಿಸೈನಿಂಗ್, ಹೋಂ ನರ್ಸಿಂಗ್, ಮೊಬೈಲ್ ಫೋನ್ ಸರ್ವಿಸಿಂಗ್, ಸಿ.ಸಿ. ಟಿವಿ ಅಳವಡಿಕೆ ತರಬೇತಿ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ಥಿ ತರಬೇತಿ, ಕಸಿ ಕಟ್ಟುವ ತರಬೇತಿ, ಗ್ರಾಹಕ ಮಾಹಿತಿ ಸೇವಾ ಕೇಂದ್ರದ ನಿರ್ವಹಣಾ ತರಬೇತಿ ನೀಡಲಾಗುವುದು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‍ನ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ತರಬೇತುದಾರರಾಗಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ 300 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತೀ ದಿನ ಬೆಳಗ್ಗೆ 10ರಿಂದ ಅಪರಾಹ್ನ 4ರವರೆಗೆ ಪ್ರತೀನಿತ್ಯ ಐದು ತಾಸುಗಳ ಕಾಲ ಒಟ್ಟು 30ತಾಸುಗಳ ತರಬೇತಿ ನೀಡಲಾಗುತ್ತದೆ. ಸ್ವ ಉದ್ಯೋಗಕ್ಕೆ ಸರಕಾರದಿಂದ ದೊರೆಯುವ ಸಹಾಯಧನ, ಸಾಲ ಮತ್ತಿತರ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲಾಗುವುದು. ತರಬೇತಿಗೆ ರೂ. 250 ಪ್ರತಿನಿಧಿ ಶುಲ್ಕವಿರುತ್ತದೆ. ಮಧ್ಯಾಹ್ನ ಭೋಜನ ವ್ಯವಸ್ಥೆ ಇದೆ. ವಸತಿ ಸೌಲಭ್ಯ ಪಡೆದುಕೊಂಡವರು ರಾತ್ರಿಯ ಭೋಜನ ಮತ್ತು ಬೆಳಗ್ಗಿನ ಉಪಹಾರಕ್ಕಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ವಸತಿ ಇರುವವರಿಗೆ ಬೆಳಗ್ಗೆ ಯೋಗಾಭ್ಯಾಸದ ಅವಕಾಶವಿದ್ದು ಯೋಗದ ಉಡುಪಿನೊಂದಿಗೆ ಹಾಜರಾಗಬೇಕು. ತರಬೇತಿಯ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‍ನ ಸಂಚಾಲಕ ಮಹಾದೇವ ಶಾಸ್ತ್ರಿ, ಸಹಕಾರ ಭಾರತಿಯ ತಾಲೂಕು ಅಧ್ಯಕ್ಷ ಕೃಷ್ಣ ಕುಮಾರ್ ರೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಕರ್ತವ್ಯಾಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News