ಕ್ರೀಡಾ ರಂಗದಲ್ಲಿ ಮಾನಸಿಕ ಅಂತರ ಬೇಡ: ಜಿ.ಆರ್.ವಿಶ್ವನಾಥ್
ಮಣಿಪಾಲ, ಜೂ.26: ಕೊರೋನಾ ವೈರಸ್ನಿಂದಾಗಿ ನಾವಿಂದು ದೈಹಿಕ ಅಂತರವನ್ನು ಕಾಪಾಡಲೇ ಬೇಕಾಗಿದೆ. ಆ ನಡುವೆಯೂ ನಾವು ಕ್ರೀಡೆಯ ಮೇಲಿನ ಪ್ರೀತಿ, ಭಾವನೆಗಳು, ಮಾನಸಿಕತೆಇವುಗಳಲ್ಲಿ ಅಂತರವಿಡದೆ ಕ್ರೀಡಾ ಚಟುವಟಿಕೆಗಳಲ್ಲಿ ಮುಂದುವರಿ ಯಬೇಕಾದ ಅವಶ್ಯ ಕತೆ ಎದುರಾಗಿದೆ. ಈ ಆವಶ್ಯಕತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರಿಕ್ ಲರ್ನಿಂಗ್ - ಆನ್ಲೈನ್ ಕ್ರಿಕೆಟ್ ತರಬೇತಿ ಕಾರ್ಯಕ್ರಮ ರೂಪುಗೊಂಡಿರುವುದು ಸಂತಸದ ವಿಚಾರ ಎಂದು ಭಾರತದ ಮಾಜಿ ಕ್ರಿಕೆಟ್ ಆಟಾರ ಜಿ. ಆರ್. ವಿಶ್ವನಾಥ್ ಹೇಳಿದ್ದಾರೆ.
ಕೊರೋನದಿಂದಾಗಿ ಸಂಪೂರ್ಣ ಸ್ಥಗಿತಗೊಂಡಿರುವ ಕ್ರಿಕೆಟ್ ಚಟುವಟಿಕೆ ಗಳಿಗೆ ಮತ್ತೆ ಚಾಲನೆ ನೀಡುವ ನಿಟ್ಟಿನಲ್ಲಿ ಇದೀಗ ಆನ್ಲೈನ್ ಕ್ರಿಕೆಟ್ ತರಬೇತಿ ನೀಡುವ ಯೋಜನೆಗೆ ಗುರುವಾರ ಆನ್ಲೈನ್ ಮೂಲಕವೇ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಸಂದೇವನ್ನು ನೀಡಿ ಮಾತನಾಡುತಿದ್ದರು.
ಕ್ರಿಕ್ ಲರ್ನಿಂಗ್ ಅಂತರ್ಜಾಲ ಮೂಲದ ಕ್ರಿಕೆಟ್ ತರಬೇತಿ ಕಾರ್ಯಕ್ರಮ, ಕ್ರಿಕೆಟ್ ಆಟದ ಶಿಕ್ಷಿಕ್ಷು ಮತ್ತು ತರಬೇತಿದಾರರ ನಡುವೆ ಇದೀಗ ಉಂಟಾಗಿ ರುವ ಅಂತರವನ್ನು ನಿವಾರಿಸಿ ಸೇತುವೆಯಾಗಿ ಮೂಡಿಬರಲಿ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಶುಭ ಹಾರೈಸಿದರು.
ಉದ್ಘಾಟನೆ ನೆರವೇರಿಸಿದ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಆಟಗಾರ ಪರಿಪೂರ್ಣತೆ ಪಡೆಯಲು ಆಟದ ಮೂಲ ತಂತ್ರಗಳ ಬಗ್ಗೆ ಸರಿಯಾದ ರೀತಿಯ ತರಬೇತಿಯನ್ನು ಹೊಂದಿರಬೇಕು. ಜತೆಗೆ ಪೂರಕ ಆಂಶಗಳಾದ ದೈಹಿಕ, ಮಾನಸಿಕ ಸ್ಥಿರತೆ, ಆಹಾರ ಕ್ರಮ, ನೈತಿಕತೆ ಇವೆಲ್ಲವುಗಳನ್ನು ಒಡಮೂಡಿಸುವಲ್ಲಿ ಸರಿಯಾದ ತರಬೇತಿ, ಮಾರ್ಗದರ್ಶನದ ಅಗತ್ಯವಿದೆ. ಇದನ್ನು ಕ್ರಿಕ್ ಲರ್ನಿಂಗ್ ತರಬೇತಿ ವೇಳೆ ನೀಡಲಿ ಎಂದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಡಾ. ಸಂದೀಪ್ ಶೆಣೈ, ಗ್ಯಾನೆಟ್ ಅಂತರ್ಜಾಲ ವೇದಿಕೆಯ ಸಂದೀಪ್ ಪಾಟೀಲ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಕಾಡೆಮಿ ಮೆನೇಜರ್ ಪ್ರವೀಣ್, ಮಾಹೆ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಫಿಡಿ ಡೇಸ್, ಮಾಹೆ ಕ್ರೀಡಾ ಕೌನ್ಸಿಲಿನ ಜಂಟಿ ಕಾರ್ಯದರ್ಶಿ ಶೋಭಾ ಈರಪ್ಪ, ಕ್ರಿಕ್ ಲರ್ನಿಂಗ್ನ ಮುಖ್ಯ ತರಬೇತುದಾರ ನಿತಿನ್ ಮುಲ್ಕಿ, ಮೆನೇಜರ್ ರೆನ್ ಟ್ರೆವೆರ್, ತಾಂತ್ರಿಕ ತಜ್ಞ ಮನೀಶ್, ಮಾಜಿ ಕ್ರಿಕೆಟ್ ಆಟಗಾರ ದಯಾನಂದ ಬಂಗೇರ ಮೊದಲಾದವರು ಹಾಜರಿದ್ದರು.
ಆಸಕ್ತರು ಅಂತರ್ಜಾಲದಲ್ಲಿ -www/Cric.gyanet.in - ವಿಳಾಸದ ಮೂಲಕ ತರಬೇತಿಗೆ ಸೇರ್ಪಡೆಗೊಳ್ಳಬಹುದು ಎಂದು ಕ್ರಿಕ್ ಲರ್ನಿಂಗಿನ ಅಂತರ್ಜಾಲ ಸಂಯೋಜಕ ಮನೀಶ್ ಡಿಸೋಜ ತಿಳಿಸಿದರು.
ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರ್ವಹಿಸಿದರೆ ಶಾನ್ ಡಿಸೋಜ ಅಂತರ್ಜಾಲ ನಿರ್ವಹಣೆಗೈದರು. ಮಾಹೆ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ವಂದಿಸಿದರು.