ಕೋಟ: ಟಿಪ್ಪರ್ ಹರಿದು ಬಾಲಕ ಮೃತ್ಯು
Update: 2020-06-26 16:15 GMT
ಕೋಟ, ಜೂ.26: ಅತಿ ವೇಗದಿಂದ ಬಂದ ಟಿಪ್ಪರ್ ಲಾರಿಯೊಂದು ಸೈಕಲ್ನಲ್ಲಿ ಹೋಗುತಿದ್ದ ಬಾಲಕನೊಬ್ಬನಿಗೆ ಢಿಕ್ಕಿ ಹೊಡೆದು ಅವನ ಮೇಲೆ ಹರಿದ ಪರಿಣಾಮ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟ ಘಟನೆ ಬೇಳೂರು ಗ್ರಾಮದ ಮೊಗೆಬೆಟ್ಟು ಉಗ್ರಾಣಿ ಬೆಟ್ಟು ಕಲಮಂಡಿ ಎಂಬಲ್ಲಿ ಇಂದು ಅಪರಾಹ್ನ ನಡೆದಿದೆ.
ಮೃತ ಬಾಲಕನನ್ನು ಮಂಜುನಾಥ (9) ಎಂದು ಗುರುತಿಸಲಾಗಿದೆ. ಆತ ಇಂದು ಅಪರಾಹ್ನ ತನ್ನ ಸೈಕಲ್ನಲ್ಲಿ ಮೊಗೆಬಟ್ಟು-ಕರಣಿ ಮಣ್ಣು ರಸ್ತೆಯಲ್ಲಿ ಹೋಗುತಿದ್ದಾಗ ಟಿಪ್ಪರ್ ಲಾರಿಯನ್ನು ಅದರ ಚಾಲಕ ಬೋಜ ಪೂಜಾರಿ ಅತಿ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಗುದ್ದಿತ್ತು. ಮಣ್ಣಿನ ರಸ್ತೆಗೆ ಬಿದ್ದ ಮಂಜುನಾಥನ ಮೇಲೆ ಟಿಪ್ಪರ್ ಹರಿದು ಹೋಗಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡ ಆತನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.