ಕೊರೋನ ನಿರ್ವಹಣೆಗೆ ವಾರ್ಡ್‌ವಾರು ತಂಡ ರಚನೆ

Update: 2020-06-29 17:12 GMT

ಮಂಗಳೂರು, ಜೂ.29: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕೊರೋನ ಸೋಂಕು ದಿನದಿಂದ ದಿನಕ್ಕೆ ವಿಪರೀತವಾಗಿ ಹರಡುತ್ತಿದ್ದು, ಕೊರೋನ ನಿರ್ವಹಣೆಗೆ ವಾರ್ಡ್‌ವಾರು ತಂಡ ರಚಿಸಲಾಗಿದೆ.

ಉಳ್ಳಾಲ ಅಝಾದ್‌ನಗರ ಇಬ್ಬರು ಮಹಿಳೆಯರಿಗೆ ಪಾಸಿಟಿವ್, ಅದರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಪ್ರಸಕ್ತ ಅಝಾದ್‌ನಗರದ ಮತ್ತೊಂದು ಮನೆಯಲ್ಲಿ 16 ಪಾಸಿಟಿವ್ ಕೇಸುಗಳು ದೃಢಪಟ್ಟಿದೆ. ಸಮ್ಮರ್ ಸ್ಯಾಂಡ್ 2, ಕೋಡಿ-1, ತಾಜ್‌ಮಹಲ್-1 ಮತ್ತು ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗೆ 4 ಪಾಸಿಟಿವ್ ಪತ್ತೆಯಾಗಿದ್ದು, ಈವರೆಗೆ 26 ಕೇಸುಗಳು ಒಂದು ವಾರದಲ್ಲಿ ದೃಢಪಟ್ಟಿದೆ.

ಉಳ್ಳಾಲದ ನಾಗರಿಕರ ಆರೋಗ್ಯ ಹಿತದೃಷ್ಟಿಯಿಂದ ಕೊರೋನ ಸೋಂಕನ್ನು ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿ, ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಸಂಘ ಸಂಸ್ಥೆಗಳಿಂದ ಆರೋಗ್ಯವಂತ 25 ರಿಂದ 45 ವರ್ಷಗಳ ಒಳಗಿನ ಸ್ಥಳೀಯರು, ಆಸಕ್ತಿಯುಳ್ಳವರು ಸೇರಿಸಿಕೊಂಡು 6 ರಿಂದ 8 ಜನರ ತಂಡ ರಚನೆ ಮಾಡಿಕೊಂಡು ಸ್ಥಳೀಯ ಏರಿಯಾದಲ್ಲಿ ಈ ಕೊರೋನ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ.

ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪೇಟೆ ಅಂಗಡಿಗಳಿಗೆ ಹೋಗುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಹಾಗೂ ಒಬ್ಬ ವ್ಯಕ್ತಿಯಿಂದ ಒಂದು ಮೀಟರ್ ಅಂತರ ಕಾಪಾಡಿಕೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡುವುದು ಕೊರೋನ ಮುಕ್ತ ವಾರ್ಡುಗಳಾಗಿ/ನಿಯಂತ್ರಣ ಮಾಡುವುದಕ್ಕಾಗಿ ಈ ತಂಡದ ಸದಸ್ಯರು ಕೆಲಸ ಮಾಡಲಿದ್ದಾರೆ.

ಈ ತಂಡಕ್ಕೆ ಸಲಹೆ ಸೂಚನೆ ಅಗತ್ಯವಿದ್ದಾಗ ನಗರಸಭೆಯಿಂದ ನೀಡಲಾಗುವುದು. ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿ ಯಾರೂ ಹೊರಗಡೆ ಹೋಗಬಾರದು. ಹೊರಗಿನಿಂದ ಬರಬಾರದು, ಅಗತ್ಯವಿದ್ದಲ್ಲಿ ಮಾತ್ರ ಹೋಗತಕ್ಕದ್ದು; ಇದನ್ನು ತಂಡದವರು ಪರಿಶೀಲಿಸಬೇಕು ಮತ್ತು ಅಗತ್ಯ ವಸ್ತುಗಳ ಬೇಡಿಕೆಗೆ ತಕ್ಕಂತೆ ಸಂಬಂಧಿಸಿದವರಿಂದ ಪಡೆದುಕೊಂಡು ಒದಗಿಸುವುದು ನಗರಸಭಾಪತಿಯಿಂದ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಲಾಗುವುದು.

ಉಳ್ಳಾಲ ನಗರದ ಜನರ ಆರೋಗ್ಯ ಹಿತದೃಷ್ಠಿಯಿಂದ ಕೊರೋನ ವೈರಸ್ ಹರಡದಂತೆ ನಿಯಂತ್ರಣ ಮಾಡಲು ತಂಡದ ಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಉಳ್ಳಾಲ ನಗರಸಭೆಯ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News