ಮಸ್ಕತ್ : ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ತಲುಪಿಸಲು ಸೋಶಿಯಲ್ ಫೋರಮ್ ನೆರವು

Update: 2020-07-01 17:18 GMT

ಮಸ್ಕತ್: ತೀವ್ರ ಅನಾರೋಗ್ಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಕಳುಹಿಸಿಕೊಡುವಲ್ಲಿ ಸೋಶಿಯಲ್ ಫೋರಮ್ ನೆರವಾಗಿದೆ. ವಂದೇ ಭಾರತ್ ಮಿಶನ್ ನಡಿ ಮಸ್ಕತ್ ನಿಂದ ಮಂಗಳೂರಿಗೆ ಪ್ರಯಾಣಿಸಿದ ವಿಮಾನದಲ್ಲಿ ರೋಗಿ ಮತ್ತು ಅವರ ಕುಟುಂಬವು ಪ್ರಯಾಣಿಸಿದ್ದು ತವರಿಗೆ ತಲುಪಿ ಸೋಶಿಯಲ್ ಫೋರಮ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಸ್ಕತ್ ನಲ್ಲಿ ನೆಲೆಸಿದ್ದ ವ್ಯಕ್ತಿಗೆ ಗಂಭೀರ ಸ್ವರೂಪದ ರೋಗವು ಕಾಣಿಸಿಕೊಂಡಿತ್ತು. ಇದರ ಶಸ್ತ್ರಚಿಕಿತ್ಸೆ ಕೂಡಲೇ ನಡೆಸುವಂತೆ ಮಸ್ಕತ್ ನ ವೈದ್ಯರು ಸಲಹೆ ನೀಡಿದ್ದರು. ಅವರ ವೈದ್ಯಕೀಯ ಮತ್ತು ಇತರ ದಾಖಲೆ ಪತ್ರಗಳೊಂದಿಗೆ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಇಡೀ ಕುಟುಂಬಕ್ಕೆ ಪ್ರಯಾಣದ ಅನುಮತಿ ದೊರಕಿಸಿಕೊಡುವಲ್ಲಿ ಸೋಶಿಯಲ್ ಫೋರಮ್ ಯಶಸ್ವಿಯಾಯಿತು. ಮಂಗಳೂರಿಗೆ ಇದೀಗ ಮೂರು ವಿಮಾನಗಳು ಹಾರಾಟ ನಡೆಸಿದ್ದು, ತುರ್ತು ಆವಶ್ಯಕತೆ ಇದ್ದ ಇದುವರೆಗೆ 25ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರ ಪ್ರಯಾಣಕ್ಕೆ ಸೋಶಿಯಲ್ ಫೋರಮ್ ಸಹಕಾರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News