ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ : ದ.ಕ.ಜಿಲ್ಲೆಯ 329 ಕಡೆ ನೇರಪ್ರಸಾರ

Update: 2020-07-02 07:02 GMT

ಮಂಗಳೂರು, ಜು. 2: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ದ.ಕ.ಜಿಲ್ಲೆಯ 329 ಕಡೆಗಳಲ್ಲಿ ಈ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು ವೀಕ್ಷಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಮಾಜಿ ಶಾಸಕ ಜೆಆರ್ ಲೋಬೊ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮುಡಾ ಮಾಜಿ ಅಧ್ಯಕ್ಷ ಕೆ. ತೇಜೋಮಯ, ಮಾಜಿ ಮೇಯರ್ ಕವಿತಾ ಸನಿಲ್, ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ಯುಎಚ್ ಖಾಲಿದ್, ಶುಭೋದಯ ಆಳ್ವ, ನಝೀರ್ ಬಜಾಲ್, ಸುಹೈಲ್ ಕಂದಕ್, ಸಬಿತಾ ಮಿಸ್ಕಿತ್, ಸಂಶುದ್ದೀನ್ ಕುದ್ರೋಳಿ, ಟಿ.ಕೆ.ಶೈಲಜಾ, ಫುಝುಲುಲ್ ರಹೀಂ ಮತ್ತಿತರರು ವೀಕ್ಷಿಸಿದರು.

ಟಿವಿ, ಎಲ್‌ಇಡಿ ಪರದೆ, ಝೂಮ್ ಆ್ಯಪ್ ಮೂಲಕ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ ಮಹಾನಗರ ಪಾಲಿಕೆ, ನಗರಸಭೆ ಪುರಸಭೆ, ನಗರ ಪಂಚಾಯತ್, ಗ್ರಾಮ ಪಂಚಾಯತ್‌ ಮಟ್ಟದಲ್ಲಿ ವೀಕ್ಷಿಸುತ್ತಿದ್ದಾರೆ. ಒಂದೆಡೆ ಟಿವಿ ಪರದೆ ಅಥವಾ ಎಲ್‌ಇಡಿ ಸ್ಕ್ರೀನ್ ಮೂಲಕ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದರೆ ಇನ್ನೊಂದೆಡೆ ಝೂಮ್ ಆ್ಯಪ್ ಮೂಲಕ ವೀಕ್ಷಿಸಿದರು.

ಬೆಂಗಳೂರಿನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದು, ವಂದೇ ಮಾತರಂ ಗೀತೆ, ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮಗಳು ನಡೆಯುವಂತೆಯೇ ಸ್ಥಳೀಯವಾಗಿಯೂ ಅದೇ ಕಾರ್ಯಕ್ರಮಗಳು ನಡೆಯಿತು.. ಈ ಕಾರ್ಯಕ್ರಮಕ್ಕಾಗಿ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಡಿಜಿಟಲ್ ಯೂತ್‌ಗಳ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News