ಪುದು ರಸ್ತೆ ಬದಿ ಕಸ ಎಸೆದರೆ ಕಾನೂನು ಕ್ರಮ: ಇಒ ಎಚ್ಚರಿಕೆ

Update: 2020-07-02 15:33 GMT

ಬಂಟ್ವಾಳ, ಜು.2: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿ ಕೆಲವೊಂದು ಕಸದ ರಾಶಿ ಕಂಡುಬರುತ್ತಿದ್ದು ಗ್ರಾಮದ ಸ್ವಚ್ಛತೆಗೆ ಯಾರೇ ಧಕ್ಕೆ ತಂದರೂ ಅಂತವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಅಧಿಕಾರವಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಧಿಕಾರಿ ರಾಜಣ್ಣ ಸೂಚನೆ ನೀಡಿದ್ದಾರೆ.

ಬುಧವಾರ ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಪಂನ ಕೋವಿಡ್ - 19 ಕಾರ್ಯಪಡೆಯ ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊರೋನ ಹಾಗೂ ಡೆಂಗ್ ನಿಯಂತ್ರಣಕ್ಕೆ ಸ್ವಚ್ಛತೆ ಕೂಡ ಪ್ರಮುಖವಾಗಿದ್ದು ಹೆದ್ದಾರಿ ಬದಿ ಕಸ ಇದ್ದಾಗ ಅದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಕಸದ ಸಮಸ್ಯೆಯ ಕುರಿತು ಆಡಳಿತ ಮಂಡಳಿಯ ಸದಸ್ಯರು ಚರ್ಚಿಸಿ ಕ್ರಮಕೈಗೊಳ್ಳಿ. ತಾಲೂಕಿನ ಎಲ್ಲಾ ಗ್ರಾಪಂಗಳ ಅಧಿಕಾರಾವಧಿ ಮುಗಿದರೂ ನಿಮ್ಮ ಚುನಾವಣೆ ತಡವಾಗಿ ನಡೆದ ಕಾರಣ ನಿಮಗೊಂದು ಅವಕಾಶವಿದೆ ಎಂದು ಇಒ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗಿದೆ. ಆದರೆ ಬೇರೆ ಪ್ರದೇಶದವರು ಇಲ್ಲಿ ಕಸ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅವರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಲಿದ್ದೇವೆ ಎಂದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ ದುರಸ್ತಿ ಪಡಿಸುವುದಕ್ಕೆ ಅವಕಾಶವಿದೆ. ಕೋವಿಡ್‌ - 19‌ನ ಕುರಿತಂತೆ ವಿಶೇಷ ಗಮನ ಹರಿಸಲು ಇಒ ಸೂಚನೆ ನೀಡಿದರು.

ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್.ಮಾತನಾಡಿ, ಕೋವಿಡ್ - 19 ಕಾರ್ಯಾಚರಣೆಗೆ ಯಾರೇ ಅಡ್ಡಿ ಪಡಿಸಿದರೂ ಠಾಣೆಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಜತೆಗೆ ಜನತೆಯಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಅಥವಾ ಸೋಪು ಬಳಕೆ, ಸಾಮಾಜಿಕ ಅಂತರ ಕಾಪಾಡುವ ಕುರಿತು ಗ್ರಾಪಂ ಜಾಗೃತಿ ಮೂಡಿಸುವಂತೆ ತಿಳಿಸಿದರು. 

ಆರೋಗ್ಯ ಇಲಾಖೆಯ ಕಾರ್ಯಾಚರಣೆ ಹಾಗೂ ಕೋವಿಡ್ - 19 ಜಾಗೃತಿಯ ಕುರಿತು ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದರ್ಶನ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೊ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News