ಉಡುಪಿ: ಬಾರಕೂರು ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
ಬ್ರಹ್ಮಾವರ, ಜು.3: ಬಾರಕೂರು ಹಾಲೆಕೊಡಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಬಾರಕೂರು ಹೊಸಾಳ ಗ್ರಾಮದ ಹರ್ಷ(25) ಮತ್ತು ಕಾರ್ತಿಕ್ (21) ಎಂದು ಗುರುತಿಸಲಾಗಿದೆ.
ಇವರು ಮೀನು ಹಿಡಿಯುವುದಕ್ಕಾಗಿ ಜು.2ರಂದು ರಾತ್ರಿ ನದಿಯಲ್ಲಿ ಬಲೆ ಬೀಸಿ ಹೋಗಿದ್ದರು. ಇಂದು ಬೆಳಗ್ಗೆ ಜು.3ರಂದು ಮುಂಜಾನೆ ಬಲೆಯನ್ನು ಎಳೆಯಲು ನದಿ ಬಳಿ ಬಂದಿದ್ದರು. ಬಲೆ ಎಳೆಯುತ್ತಿದ್ದಾಗ ಸುಮಾರು 8.45ರ ಸುಮಾರಿಗೆ ಯುವಕರಿಬ್ಬರು ನೀರು ಪಾಲಾಗಿದ್ದರು. ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇವರಿಗಾಗಿ ತೀವ್ರ ಹುಡುಕಾಟ ನಡೆಸಿದರು. ಬೆಳಗ್ಗೆ 11ಗಂಟೆ ಸುಮಾರಿಗೆ ಅಲ್ಲೇ ಸಮೀಪ ಇಬ್ಬರ ಮೃತದೇಹ ಪತ್ತೆಯಾಗಿದೆ.
ಇವರಿಬ್ಬರು ಸಂಬಂಧಿಕರಾಗಿದ್ದಾರೆ. ಮೃತ ಹರ್ಷ, ಖಾಸಗಿ ಫೆನ್ಸಾನ್ಸ್ ಕಂಪೆನಿಯಲ್ಲಿ ರಿಕವರಿ ಕೆಲಸ ಮಾಡಿಕೊಂಡಿದ್ದರೆ, ಕಾರ್ತಿಕ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದನು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.