ಪತ್ನಿಯನ್ನು ಕೊಲೆಗೈದು ಪತಿ ಪರಾರಿ; ಆರೋಪ

Update: 2020-07-03 14:30 GMT

ಮಂಗಳೂರು, ಜು.3: ನಗರದ ಹೊರವಲಯದ ಬಜ್ಪೆಯ ಕರಂಬಾರ್‌ನಲ್ಲಿ ಪತ್ನಿಯನ್ನು ಕೊಲೆಗೈದ ಆರೋಪಿ ಪತಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ.

ಕಾವೂರಿನಲ್ಲಿ ವಾಸವಿದ್ದ ಮೂಲತಃ ಹಾಸನದ ಟಿಪ್ಪರ್ ಚಾಲಕ ಗಣೇಶ್ (40) ತನ್ನ ಪತ್ನಿ ಶಾಂತಾ (30) ಅವರನ್ನು ಬುಧವಾರ ಸಂಜೆ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಹಾಕಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಗುರುವಾರ ಸಂಜೆ ಈ ವಿಷಯ ಬಹಿರಂಗವಾಗಿ ರಾತ್ರಿ ಕಾವೂರು ಠಾಣೆ ಪೊಲೀಸರ ಗಮನಕ್ಕೆ ಬಂದಿತ್ತು.

ಕೊಲೆ ಮಾಡಿದ ಸ್ಥಳದಲ್ಲಿ ಆಕೆಯ ಪರ್ಸ್ ಹಾಗೂ ಹೆಲ್ಮೆಟ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಹೊರಗಡೆಗೆ ತಿರುಗಾಡಲು ಕರೆದೊಯ್ಯುವುದಾಗಿ ತಿಳಿಸಿ ಆಕೆಯನ್ನು ಕರೆದೊಯ್ದಿದ್ದ. ಬಳಿಕ ಇಬ್ಬರೂ ಹಿಂದಿರುಗಿ ಮನೆಗೆ ಬಂದಿರಲಿಲ್ಲ. ಮನೆಯಲ್ಲಿ ಅತ್ತೆ ಹಾಗೂ ಆತನ ಇಬ್ಬರು ಮಕ್ಕಳಿದ್ದು, ಆತನೇ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವ ವಿಷಯ ತಿಳಿಸಿದ್ದ ಎನ್ನಲಾಗಿದೆ.

ಪರಿಸರ ಚಿರಪರಿಚಿತ: ಆರೋಪಿ ಗಣೇಶ್‌ಗೆ ಕರಂಬಾರು ಪರಿಸರ ಚಿರಪರಿಚಿತವಾಗಿದ್ದು, ಟಿಪ್ಪರ್ ಚಾಲಕನಾಗಿ ಕೆಂಪು ಕಲ್ಲು ಸಾಗಾಟ ಮಾಡಲು ಆತ ಅಲ್ಲಿಗೆ ಆಗಾಗ ಹೋಗುತ್ತಿದ್ದ. ಆಗಲೇ ಆತ ಪತ್ನಿಯನ್ನು ಇಲ್ಲಿಗೆ ಕರೆ ತಂದು ಕೊಲೆಗೆ ಮಾಡುವ ಸಂಚು ರೂಪಿಸಿ, ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕರೆ ತಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಾವೂರು ಇನ್‌ಸ್ಪೆಕ್ಟರ್ ರಾಘವ ಪಡೀಲ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯ ಬಗ್ಗೆ ಸುಳಿವು ಲಭಿಸಿದ್ದು, ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News