ದ.ಕ. ಜಿಲ್ಲಾದ್ಯಂತ ಬಿರುಸಿನ ಮಳೆ

Update: 2020-07-04 12:43 GMT

ಮಂಗಳೂರು, ಜು.4: ದ.ಕ.ಜಿಲ್ಲೆಯಲ್ಲಿ ಕೆಲವು ದಿನಗಳ ಕಾಲ ಬಿಡುವು ಪಡೆದಿದ್ದ ಮುಂಗಾರು ಮಳೆಯು ಶುಕ್ರವಾರದಿಂದ ಮತ್ತೆ ವೇಗ ನೀಡಿದ್ದು, ಶನಿವಾರ ಜಿಲ್ಲಾದ್ಯಂತ ಬಿರುಸಿನ ಮಳೆಯಾಗಿದೆ. ಮುಂಜಾನೆಯಿಂದಲೇ ಆರಂಭಗೊಂಡ ಮಳೆಯು ರಾತ್ರಿಯವರೆಗೂ ಸುರಿದಿತ್ತು. ಎಡಬಿಡದೆ ಸುರಿದ ಮಳೆಯಿಂದ ಜನಜೀವನ ಭಾಗಶಃ ಅಸ್ತವ್ಯಸ್ಥಗೊಂಡಿತ್ತು. ಮೊದಲೇ ಕೊರೋನ ವೈರಸ್ ರೋಗ ಭೀತಿಯಿಂದ ಸ್ವಯಂ ನಿರ್ಬಂಧಕ್ಕೊಳಗಾಗಿರುವ ಬಹುತೇಕ ಮಂದಿ ಮಳೆಯಿಂದಾಗಿ ಶನಿವಾರ ರಸ್ತೆಗೆ ಇಳಿಯಲಿಲ್ಲ. ವಾಹನಗಳ ಸಂಖ್ಯೆಯಲ್ಲೂ ಇಳಿಮುಖ ಕಂಡು ಬಂದಿತ್ತು. ರವಿವಾರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಖಾಸಗಿ ಕಚೇರಿಗಳು ಬಾಗಿಲು ಎಳೆದಿದ್ದವು. ಸಂಜೆಯ ವೇಳೆಗೆ ಹೆಚ್ಚಿನ ಬಸ್‌ಗಳು ಓಡಾಟ ನಿಲ್ಲಿಸಿದ್ದವು. ಅಲ್ಲದೆ ಅಂಗಡಿ ಮುಂಗಟ್ಟುಗಳು ಕೂಡ ಸ್ವಯಂ ಆಗಿ ಬಂದ್ ಆಗಿದ್ದವು.

ಮಂಗಳೂರು ನಗರವಲ್ಲದೆ ಗ್ರಾಮಾಂತರದಲ್ಲೂ ಉತ್ತಮ ಮಳೆಯಾಗಿದೆ. ನಗರದ ಹಲವು ಕಡೆ ಒಳಚರಂಡಿಯಲ್ಲಿ ಹೂಳು ತುಂಬಿದ ಕಾರಣ ರಸ್ತೆಯಲ್ಲೇ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಿಂಟಾಯಿತು. ನಗರದ ಪಂಪ್‌ವೆಲ್, ಜ್ಯೋತಿ, ಕೊಟ್ಟಾರ ಚೌಕಿ ಸಹಿತ ವಿವಿಧ ಭಾಗದಲ್ಲಿ ಮಳೆನೀರು ರಸ್ತೆಯಲ್ಲಿಯೇ ಹರಿದು ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಗ್ರಾಮಾಂತರ ಭಾಗದ ಕೆಲವು ಕಡೆ ಗುಡ್ಡ ಜರಿತಗೊಂಡಿವೆ, ಮರ ಸಹಿತ ವಿದ್ಯುತ್ ಕಂಬ ಉರುಳಿವೆ, ತಡೆಗೋಡೆ ಕುಸಿದಿದೆ. 

ಗುರುಪುರ: ಗುಡ್ಡ ಕುಸಿದು ಅಣೆಬಳಿ ರಸ್ತೆ ಬಿರುಕು
ಗುರುಪುರ ಪೇಟೆಯಿಂದ ಗುರುಪುರ ಗ್ರಾಪಂ ಸಂಪರ್ಕಿಸುವ ಕಾಂಕ್ರಿಟ್ ರಸ್ತೆಯು ಅಣೆಬಳಿಯಲ್ಲಿ ಸಂಪೂರ್ಣ ಬಿರುಕು ಬಿಟ್ಟಿದ್ದು, ರಸ್ತೆ ಪಕ್ಕದಲ್ಲಿರುವ ದಾರೂಲ್ ಉಲೂಮ್ ಮಸೀದಿ-ಮದ್ರಸ ಹಾಗೂ ಐದಾರು ಮನೆಗಳು ಅಪಾಯಕ್ಕೆ ಸಿಲುಕಿವೆ.
ಗುಡ್ದದಲ್ಲಿ ನಿರ್ಮಿಸಲಾದ ಈ ಕಡಿದಾದ ರಸ್ತೆಗೆ ಹೊಂದಿಕೊಂಡು ನೂರಾರು ಮನೆಗಳಿವೆ. ಈ ಬಾರಿ ರಸ್ತೆ ಪಕ್ಕದ ಗುಡ್ಡ ಆಳಕ್ಕೆ ಜರಿಯುತ್ತಿದೆ. ಪರಿಣಾಮ, ಮನೆಗಳು ಮತ್ತು ಮಸೀದಿಗೆ ಅಪಾಯ ತಪ್ಪಿದ್ದಲ್ಲ. ಜೊತೆಗೆ ಕಾಂಕ್ರೀಟ್ ರಸ್ತೆ ಮಣ್ಣುಪಾಲಾಗುವ ಸಾಧ್ಯತೆ ಇದೆ.

‘ರಸ್ತೆ ದುರಸ್ತಿ, ಮನೆಗಳು ಮತ್ತು ಮಸೀದಿಗೆ ಎದುರಾಗಿರುವ ಅಪಾಯದ ಬಗ್ಗೆ ಈಗಾಗಲೇ ಗುರುಪುರ ಗ್ರಾಪಂ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ದೂರು ನೀಡಲಾಗಿದ್ದು, ತಕ್ಷಣ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದು ದಾರೂಲ್ ಉಲೂಮ್ ಮಸೀದಿಯ ಅಧ್ಯಕ್ಷ ಹಾಜಿ ಶಾಹುಲ್ ಹಮೀದ್ ಮೆಟ್ರೋ ತಿಳಿಸಿದ್ದಾರೆ.

ಮಳೆ ವಿವರ
►ಬಂಟ್ವಾಳ- 80.6 ಮಿ.ಮೀ.
►ಬೆಳ್ತಂಗಡಿ - 52.7 ಮಿ.ಮೀ
►ಮಂಗಳೂರು- 92.5 ಮಿ.ಮೀ.
►ಪುತ್ತೂರು- 60.7 ಮಿ.ಮೀ.
►ಸುಳ್ಯ- 63.2 ಮಿ.ಮೀ.
►►ಜಿಲ್ಲೆಯ ಸರಾಸರಿ-70.0 ಮಿ.ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News