ಉಡುಪಿ: ಜಿಲ್ಲೆಯಲ್ಲಿ 19 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 1277ಕ್ಕೆ ಏರಿಕೆ

Update: 2020-07-04 16:25 GMT

ಉಡುಪಿ, ಜು.4: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪತ್ತೆಗಾಗಿ ಹಾಗೂ ಸೋಂಕು ಸಮುದಾಯಕ್ಕೂ ಹಬ್ಬಿದೆಯೇ ಎಂಬುದರ ಪರೀಕ್ಷೆಗಾಗಿ ಆರೋಗ್ಯ ಇಲಾಖೆ ಮತ್ತೆ ಅಧಿಕ ಮಂದಿಯ ಗಂಟಲು ದ್ರವ ಮಾದರಿಯ ಸಂಗ್ರಹಕ್ಕೆ ಮುಂದಾಗಿದ್ದು, ಶನಿವಾರ ಒಟ್ಟು 1047 ಮಂದಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ ಮತ್ತೆ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 733 ಮಂದಿಯ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಇಂದು ಪಾಸಿಟಿವ್ ಬಂದ 19 ಮಂದಿಯಲ್ಲಿ ಮುಂಬಯಿಯಿಂದ ಬಂದ ಒಬ್ಬರು, ಬೆಂಗಳೂರಿನಿಂದ ಬಂದ ಮೂವರಿದ್ದು, ಉಳಿದ 15 ಮಂದಿಯೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕಿತ ರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ 7 ಮಂದಿ ಹಾಗೂ ಕುಂದಾಪುರ ತಾಲೂಕಿನ 12 ಮಂದಿ ಇದ್ದಾರೆ. 11 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಹಾಗೂ 4 ವರ್ಷ ಪ್ರಾಯದ ಒಂದು ಹೆಣ್ಣು ಮಗು ಪಾಲಿಟಿವ್ ಬಂದವರಲ್ಲಿ ಸೇರಿದ್ದಾರೆ. ಅಲ್ಲದೇ ಇಬ್ಬರು ಹಿರಿಯ ನಾಗರಿಕರಿಗೂ ಇಂದು ಪಾಸಿಟಿವ್ ಬಂದಿದೆ.

ಶನಿವಾರದ 19 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1277ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು (8345) ಹಾಗೂ ಕಲಬುರಗಿ ಜಿಲ್ಲೆ (1597) ಮೊದಲೆರಡು ಸ್ಥಾನದಲ್ಲಿವೆ. ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಇಂದು 73 ಮತ್ತು 75 ಪಾಸಿಟಿವ್‌ಗಳೊಂದಿಗೆ ಕ್ರಮವಾಗಿ 1154 ಮತ್ತು 1087 ಪ್ರಕರಣಗಳೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದರೆ, ಯಾದಗಿರಿ 971 ಪ್ರಕರಣಗಳೊಂದಿಗೆ ಆರನೇ ಸ್ಥಾನದಲ್ಲಿದೆ.

10 ಮಂದಿ ಗುಣಮುಖ: ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಗುಣಮುಖರಾದ 10 ಮಂದಿಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಎಂಟು ಮಂದಿ ಹಾಗೂ ಕಾರ್ಕಳ ಆಸ್ಪತ್ರೆಯ ಇಬ್ಬರು ಸೇರಿದ್ದಾರೆ. ಈ ಮೂಲಕ ಈವರೆಗೆ ಬಿಡುಗಡೆಗೊಂಡವರ ಸಂಖ್ಯೆ ಜಿಲ್ಲೆಯಲ್ಲಿ 1114ಕ್ಕೇರಿದೆ. ಇನ್ನೂ 160 ಮಂದಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

ಶನಿವಾರ ಸೋಂಕಿನ ಪರೀಕ್ಷೆಗಾಗಿ ಪಡೆದ 1047 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳಲ್ಲಿ ಕೋವಿಡ್ ಸಂಪರ್ಕಿತರು 84, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ ಮೂವರು ಹಾಗೂ ಕೋವಿಡ್ ದೇಶದ ವಿವಿದೆಡೆಗಳ ಹಾಟ್‌ಸ್ಪಾಟ್‌ಗಳಿಂದ ಬಂದ 957 ಮಂದಿಯ ಸ್ಯಾಂಪಲ್‌ಗಳು ಸೇರಿವೆ.

ಇಂದು ಪಡೆದ 1047 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿ ಸಿದ ಮಾದರಿಗಳ ಒಟ್ಟು ಸಂಖ್ಯೆ 17,545ಕ್ಕೇರಿದೆ. ಇವುಗಳಲ್ಲಿ ಈವರೆಗೆ 14,556 ನೆಗೆಟಿವ್, 1277 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 1712 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 28 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 11 ಮಂದಿ ಕೋವಿಡ್ ಶಂಕಿತರು, 9 ಮಂದಿ ಉಸಿರಾಟ ತೊಂದರೆಯವರು ಹಾಗೂ ಎಂಟು ಮಂದಿ ಶೀತಜ್ವದಿಂದ ಬಳಲುವವರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 11 ಮಂದಿ ಬಿಡುಗಡೆಗೊಂಡಿದ್ದು, 109 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 28 ಮಂದಿ ಸೇರಿದಂತೆ ಒಟ್ಟು 5937 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1034 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

ವೈದ್ಯ, ಅಟೋ ಚಾಲಕರು ಪಾಸಿಟಿವ್
ಜಿಲ್ಲೆಯಲ್ಲಿ ಈಗಾಗಲೇ ಕೊರೋನ ಸೋಂಕಿಗೆ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳು ಒಂದೇ ಸಮನೆ ಏರತೊಡಗಿವೆ. ಇಂದು ಪಾಸಿಟಿವ್ ಬಂದ 19 ಪಾಸಿಟಿವ್ ಪ್ರಕರಣಗಳಲ್ಲಿ 15 ಇದೇ ವಿಭಾಗಕ್ಕೆ ಸೇರಿದೆ.
ನಿನ್ನೆಯಷ್ಟೇ ಸೋಂಕು ಪತ್ತೆಯಾದ ಮಣಿಪಾಲ ನಿವಾಸಿ ಕೆಎಂಸಿ ವೈದ್ಯರ ಪ್ರಾಥಮಿಕ ಸಂಪರ್ಕಿತರಲ್ಲೂ ಇಂದು ಸೋಂಕು ಪತ್ತೆಯಾಗಿದೆ. ಅದೇ ರೀತಿ ಕೆಲದಿನಗಳ ಹಿಂದೆ ಪಾಸಿಟಿವ್ ಆದ ಕೋಟದ ಹೊಟೇಲೊಂದರ ಮಾಲಕರ ಒಬ್ಬ ಪ್ರಾಥಮಿಕ ಸಂಪರ್ಕಿತರಲ್ಲೂ ಸೋಂಕು ಪತ್ತೆಯಾಗಿದೆ. ಅವರು ಹೊಟೇಲ್‌ನ ಖಾಯಂ ಗಿರಾಕಿಯಾಗಿದ್ದರು ಎಂದು ತಿಳಿದುಬಂದಿದೆ.

ಅದೇ ರೀತಿ ಉಡುಪಿಯ ಆದಿಉಡುಪಿಯ ಪ್ರಸಿದ್ಧ ಮೀನು ಊಟದ ಹೊಟೇಲಿನ ಮಾಲಕರು, ಕುಂದಾಪುರದ ಗೋಪಾಡಿ ಮತ್ತು ಬಳ್ಕೂರಿನ ಅಟೋ ಚಾಲಕರು ಸಹ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ನಗರಸಭೆ ಸದಸ್ಯರಿಗೆ ಸೋಂಕು

ಮಲ್ಪೆ ಪರಿಸರದ ನಗರಸಭಾ ಸದಸ್ಯರೊಬ್ಬರು ಇಂದು ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೊರೋನ ಸೋಂಕಿತ ಸಂಬಂಧಿಯೊಬ್ಬರನ್ನು ನೋಡಲು ಅವರು ತೆರಳಿದ್ದಾಗ ಈ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News