ಎಸೆಸೆಲ್ಸಿ ಮೌಲ್ಯಮಾಪನ ಕಾರ್ಯ ಆಯಾ ಜಿಲ್ಲೆಯಲ್ಲೇ ನಡೆಯಲಿ: ಎಂ.ಆರ್.ಮಾನ್ವಿ ಆಗ್ರಹ

Update: 2020-07-04 18:01 GMT

ಭಟ್ಕಳ: ಜು.13ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ನಡೆಯಲಿದ್ದು ಇದಕ್ಕಾಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಿ ಶಿಕ್ಷಕರು ಮೌಲ್ಯಮಾಪನ ಕಾರ್ಯ ಮಾಡಬೇಕಾಗಿದ್ದು, ಇದರಿಂದಾಗಿ ಶಿಕ್ಷಕರು ಸಂಕಟವನ್ನು ಎದುರಿಸುವಂತಾಗಿದ್ದು ಆಯಾ ಜಿಲ್ಲೆಯ ಶಿಕ್ಷಕರನ್ನು ಸ್ವಂತ ಜಿಲ್ಲೆಯಲ್ಲೇ ಮೌಲ್ಯಮಾಪನ ಕಾರ್ಯ ಮಾಡುವಂತೆ ಅನುವು ಮಾಡಿಕೊಡಬೇಕೆಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ಎಂ.ಆರ್.ಮಾನ್ವಿ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಮನವಿ ಪತ್ರವನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಹಾಗೂ  ರಾಜ್ಯದ ಶಿಕ್ಷಣ ಸಚಿವರಿಗೆ ಇಮೇಲ್ ಮೂಲಕ ರವಾನಿಸಿದ್ದು, ಕೊರೋನ ಸಂಕಷ್ಟದಲ್ಲಿ ಮೌಲ್ಯಮಾಪನ ಕಾರ್ಯವು ಗಂಭೀರ ಸಮಸ್ಯೆಯನ್ನು ತಂದೊಡ್ಡಲಿದೆ. ಆ ಕಾರಣಕ್ಕಾಗಿ ಆಯಾ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಲ್ಲೆ ಎಲ್ಲ ವಿಷಯದ ಮೌಲ್ಯಮಾಪನ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಿ ಅಲ್ಲಿ ಉಳಿದುಕೊಳ್ಳುವುದು ಊಟ, ತಿಂಡಿ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ತರಕನ್ನಡ ಜಿಲ್ಲೆಯ ಮೌಲ್ಯಮಾಪಕರಿಗೆ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೌಲ್ಯಮಾಪಕರಾಗಿ ನೇಮಿಸಿ ಸರ್ಕಾರ ಅದೇಶಿಸಿದೆ. ಕೂಡಲೆ ಸರ್ಕಾರ ತನ್ನ ಅದೇಶವನ್ನು ಹಿಂದಕ್ಕೆ ಪಡೆದು ಹೊಸ ಆದೇಶವನ್ನು ಹೊರಡಿಸಬೇಕೆಂದೂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ ಖಾಸಗಿ ಶಾಲಾ ಶಿಕ್ಷಕರಿಗೆ ಮೌಲ್ಯಮಾಪಕರಾಗಿ ನೇಮಕ ಮಾಡಿದ್ದು ಅವರೂ ಈಗಾಗಲೇ ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಿಸಲು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಖಾಸಗಿ ಶಿಕ್ಷಕರಿಗೆ ಪ್ರತಿ ಮೌಲ್ಯಮಾಪಕರಿಗೆ ದ್ವಿಗುಣ ಸಂಭಾವನೆ ನೀಡಬೇಕೆಂದೂ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News