ಬೆಳ್ತಂಗಡಿ: ಬೈಕ್ ಕಳವು ಪ್ರಕರಣ; ಐವರು ಆರೋಪಿಗಳ ಬಂಧನ

Update: 2020-07-05 07:16 GMT

ಬೆಳ್ತಂಗಡಿ, ಜು.5: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿ ಐವರನ್ನು ಬಂಧಿಸಿದ್ದು, 3.6 ಲಕ್ಷ ರೂ. ಬೆಲೆಬಾಳುವ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸುರತ್ಕಲ್ ನ ವಿಜಯ (23), ಉಳಾಯಿಬೆಟ್ಟು ನಿವಾಸಿ ಪ್ರದೀಪ್ (27), ಬಾಳೆಪುಣಿ ಪೂಪಾಡಿಕಲ್ಲು ನಿವಾಸಿ ಸುದೀಶ್ ಕೆಕೆ (20), ಉಜಿರೆಯ ಲಾಯಿಲ ನಿವಾಸಿಗಳಾದ ಮೋಹನ (21) ಮತ್ತು ನಿತಿನ್ ಕುಮಾರ್ (22) ಬಂಧಿತರು.

ಶನಿವಾರ ಜೈನ್ ಪೇಟೆ ಬಳಿ ವಾಹನ ತಪಾಸಣೆಯ ವೇಳೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ 4 ಬೈಕ್, ಕಳವಿಗೆ ಬಳಸಿದ ಓಮ್ನಿ ಕಾರು ಸೇರಿ ಒಟ್ಟು 3,60,000 ರೂ. ಬೆಲೆಬಾಳುವ ವಾಹನಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News