ಸೂಫಿಯುಂ ಸುಜಾತಯುಂ

Update: 2023-06-30 06:04 GMT

‘ಮಾತಿಲ್ಲ ಕತೆಯಿಲ್ಲ’ ಎಂದು ಕಾಯ್ಕಿಣಿಯವರು ಹೇಳಿರುವುದು ಪ್ರೇಮಕ್ಕೆ. ಆದರೆ ಈ ಚಿತ್ರದಲ್ಲಿ ನಾಯಕಿಯೇ ಮೂಗಿ. ಇಲ್ಲಿ ಕತೆಗಿಂತ ಅವಳ ಪಾಲಿನ ಭಾವಗಳೇ ರೋಮಾಂಚನ ತರಿಸುತ್ತವೆ.

ಮಸೀದಿಗೆ ಆಗಮಿಸುವ ಸೂಫಿ ಮತ್ತು ಆತನ ಆಕರ್ಷಕ ಮತ್ತು ವಿಭಿನ್ನವಾದ ಆಝಾನ್ ಕರೆ, ಅದನ್ನು ಕೇಳಿ ಆತುರದಿಂದ ಪ್ರಾರ್ಥನೆಗೆ ಆಗಮಿಸುವ ಮುಸ್ಲಿಮರು.. ಹೀಗೆ ಆರಂಭವಾಗುತ್ತದೆ ಸಿನೆಮಾ. ಆದರೆ ಅದೇ ದೃಶ್ಯದಲ್ಲೇ ಸೂಫಿಯ ಸಾವಾಗುತ್ತದೆ.

ಫ್ಲ್ಯಾಶ್ ಬ್ಯಾಕ್ ಮೂಲಕ ಸಾಗುವ ಕತೆಯಲ್ಲಿ ಹತ್ತು ವರ್ಷಗಳ ಹಿಂದೆ ಆತನಿಗೆ ಬಸ್ಸಲ್ಲಿ ಸಿಗುವ ಯುವತಿ, ಆಕೆಯ ಕೈ ಸೇರುವ ಆತನ ಮಣಿಹಾರ, ಅವೆಲ್ಲವೂ ಪ್ರಥಮ ನೋಟದ ಪ್ರೇಮಕ್ಕೆ ಆಧಾರ. ಆಕೆಯ ಹೆಸರು ಸುಜಾತ. ಹುಟ್ಟಿನಿಂದ ಮಾತು ಬಾರದವಳು. ಆದರೆ ಕಿವಿ ಚೆನ್ನಾಗಿದೆ. ಅವಳೂ ಚೆನ್ನಾಗಿದ್ದಾಳೆ. ಕಥಕ್ ನೃತ್ಯಗಾತಿ ಬೇರೆ. ಸೂಫಿ ಸಕಲ ಕಲಾವಲ್ಲಭ. ಆತನ ಆಝಾನ್ ದನಿ, ತುದಿಗಾಲಿನ ನೃತ್ಯ ಎಲ್ಲವೂ ಆಕೆಗೆ ಅಚ್ಚರಿ. ಅದರ ಹಿಂದೆ ಬೀಳುವುದೇ ಆಕೆಯ ದಿನಚರಿ. ಆಕೆಯ ತಂದೆಗೆ ವಿಷಯ ತಿಳಿದಾಗ ತಕ್ಷಣ ವಿದೇಶದಲ್ಲಿರುವ ತನ್ನ ದೂರದ ಸಂಬಂಧಿ ರಾಜೀವನನ್ನು ನೆನಪಿಸಿಕೊಳ್ಳುತ್ತಾನೆ. ಮೊದಲೇ ಸುಜಾತಳನ್ನು ಮೆಚ್ಚಿರುವ ರಾಜೀವನ ಜತೆಗೆ ಮದುವೆ ಮಾಡಿಸುತ್ತಾನೆ. ಮದುವೆಯಾಗಿ ವಿದೇಶದಲ್ಲೇ ನೆಲೆಸಿದ ದಂಪತಿಗೆ ಒಂದು ಮಗುವೂ ಜನಿಸುತ್ತದೆ. ಇತ್ತ ಕಡೆ ಅಂದೇ ಊರು ಬಿಟ್ಟು ಹೋಗಿದ್ದ ಸೂಫಿ, ದಶಕದ ಬಳಿಕ ಸುಜಾತಳ ಊರಿಗೆ ಮರಳುತ್ತಾನೆ. ಮಸೀದಿಯಲ್ಲಿನ ಪ್ರಾರ್ಥನೆ ವೇಳೆ ಹೃದಯಾಘಾತದಿಂದ ಆದ ಸಾವಿನ ಸುದ್ದಿ ವಿದೇಶದಲ್ಲಿರುವ ಸುಜಾತಾಳನ್ನು ತಲುಪುತ್ತದೆ. ಸುಜಾತಾ ಪತಿ ರಾಜೀವನೊಂದಿಗೆ ಸೂಫಿಯ ಅಂತಿಮ ದರ್ಶನಕ್ಕಾಗಿ ಬರುತ್ತಾಳೆ. ಬಳಿಕ ನಡೆಯುವ ನಾಟಕೀಯ ಘಟನೆಗಳೇ ಚಿತ್ರದ ಹೈಲೈಟ್.

ಘಟನೆ ನಡೆಯುವ ಪ್ರದೇಶ ಕೇರಳ ಕರ್ನಾಟಕ ಗಡಿ ಭಾಗದ ಹಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರ ನಡುವೆ ಇರಬೇಕಾದ ಅಗತ್ಯದ ಭಾವೈಕ್ಯವೂ ಇದೆ. ಆದರೆ ಅದು ಪ್ರೇಮ ವಿವಾಹದ ತನಕ ಮುಂದುವರಿದರೆ ಏನಾಗಬಹುದು? ಬಹುಶಃ ಮಲಯಾಳಂ ಭಾಷೆಯಲ್ಲಿ ಇಂತಹ ಸಿನೆಮಾಗಳು ಅಪರೂಪವಲ್ಲ. ಯಾಕೆಂದರೆ ಅಲ್ಲಿ ಅಂತಹ ವಿವಾಹಗಳು ರಕ್ತಪಾತಗಳಿಲ್ಲದೆ ನೆಮ್ಮದಿಯಾಗಿ ನಡೆದ ಉದಾಹರಣೆಗಳಿವೆ. ಆದರೆ ಈ ಸಿನೆಮಾ ಪ್ರೇಮಿಗಳ ಕುಟುಂಬ, ಪ್ರೇಮಿಗಳಿಂದಾಚೆ ಪ್ರೇಯಸಿಯ ಬದುಕನ್ನು ಕೇಂದ್ರೀಕರಿಸಿರುವ ಕಾರಣ ವಿಭಿನ್ನವಾಗಿದೆ.

ಸುಂದರ ಯುವಕ ಸೂಫಿಯ ಪಾತ್ರದಲ್ಲಿ ದೇವ್ ಮೋಹನ್ ಆಕರ್ಷಕವಾಗಿದ್ದಾರೆ. ಮಾತ್ರವಲ್ಲ, ಮುಗ್ಧ ಪ್ರೇಮಿಯಾಗಿ ಆಕರ್ಷಕ ನಟನೆಯನ್ನೂ ನೀಡಿದ್ದಾರೆ. ಚಿತ್ರದ ಆರಂಭದಲ್ಲೇ ನಾಯಕನ ಸಾವಾದರೂ ಇಡೀ ಕತೆ ಆತನ ಸುತ್ತ ಮತ್ತು ಆತನನ್ನು ಪ್ರೀತಿಸುವ ನಾಯಕಿಯ ಸುತ್ತ ಸಾಗುತ್ತದೆ. ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್ ನಟಿ ಅದಿತಿ ರಾವ್. ಮೂಕಿಯ ಪಾತ್ರವಾದ ಕಾರಣ ಮುಖಾಭಿನಯಕ್ಕೆ ಅವಕಾಶ ಹೆಚ್ಚು. ಆದರೆ ಬಹುಶಃ ನೃತ್ಯಗಾತಿಯ ಪಾತ್ರವಾದ ಕಾರಣವೋ ಏನೋ ಆಕೆಯ ಆಂಗಿಕ ಅಭಿನಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಡ್ಯಾನ್ಸರ್ ಇಮೇಜ್‌ನೊಳಗೆ ಅವುಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಆಕೆ ಗೆದ್ದಿದ್ದಾರೆ. ಚಿತ್ರದಲ್ಲಿನ ನಾಯಕನ ಸಾವಾದರೂ ಸ್ಟಾರ್ ಇಮೇಜ್ ಇರದೆ ನಟಿಸಿರುವ ರಾಜೀವ್ ಪಾತ್ರಧಾರಿ ಜಯಸೂರ್ಯ ಕೂಡ ಕತೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸುಜಾತಳ ತಾಯಿಯಾಗಿ ಕಲಾರಂಜಿನಿ ಮತ್ತು ತಂದೆಯಾಗಿ ಸಿದ್ದೀಖ್ ಸಿಕ್ಕ ಅವಕಾಶದಲ್ಲಿ ಸ್ಮರಣಾರ್ಹ ಅಭಿನಯ ನೀಡಿದ್ದಾರೆ. ಅದರಲ್ಲಿಯೂ ಮಗಳು ಸೂಫಿಯೊಂದಿಗೆ ಹೋಗುತ್ತಾಳೆ ಎನ್ನುವ ಸಂದರ್ಭದಲ್ಲಿ ತಂದೆಯ ವರ್ತನೆಯನ್ನು ಮನಮುಟ್ಟುವಂತೆ ನಿರ್ವಹಿಸಿದ್ದಾರೆ ಸಿದ್ದೀಖ್.

ಅಂದ ಹಾಗೆ ಇದು ಒಟಿಟಿ ಫ್ಲಾಟ್‌ಫಾರ್ಮಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಮಲಯಾಳಂನ ಮೊದಲ ಚಿತ್ರ. ಹಾಗಾಗಿ ಛಾಯಾಗ್ರಹಣದ ವೈಭವ ಏನೇ ಇದ್ದರೂ ದೊಡ್ಡ ಪರದೆಯಲ್ಲಿ ನೋಡುವಂತಿಲ್ಲ. ಆದರೆ ಚಿತ್ರದ ಸಂಗೀತ ಮತ್ತು ಸೌಂದರ್ಯ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.

ಹಸಿರು ಪರಿಸರ, ಸಂಗೀತದ ಪರಿಕರ, ಇವೆಲ್ಲವನ್ನೂ ಚಿತ್ರೀಕರಿಸಿರುವ ರೀತಿ, ಕತೆಯೊಳಗಿರುವ ಸಂಬಂಧಗಳ ಪ್ರೀತಿ ಇವೆಲ್ಲವೂ ಚಿತ್ರ ನೋಡಿದ ಬಳಿಕ ನಮ್ಮಲ್ಲೇ ಉಳಿಯುತ್ತವೆ. ಸೂಫಿ ಮತ್ತು ಸುಜಾತ ಜತೆಗೆ ನಾವೂ ಸೇರಿಕೊಳ್ಳುತ್ತೇವೆ.

ತಾರಾಗಣ: ಜಯಸೂರ್ಯ, ಅದಿತಿ ರಾವ್

ನಿರ್ದೇಶಕ: ನಾರಾಣಿಪುಳ ಶಾನವಾಜ್

ನಿರ್ಮಾಣ: ವಿಜಯ್ ಬಾಬು

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News