ಗುರುಪುರ ಗುಡ್ಡ ಕುಸಿತ ಪ್ರಕರಣ: ತಹಶೀಲ್ದಾರರ ನಿರ್ಲಕ್ಷ್ಯವೇ ಕಾರಣ; ಎಸ್ಡಿಪಿಐ ಆರೋಪ
ಮಂಗಳೂರು,ಜು.6: ಗುರುಪುರ ಸಮೀಪದ ಕೈಕಂಬ ಬಂಗ್ಲೆಗುಡ್ಡೆಯಲ್ಲಿ ರವಿವಾರ ನಡೆದ ಘಟನೆಗೆ ಮಂಗಳೂರು ತಹಶೀಲ್ದಾರ್ ಅವರ ನಿರ್ಲಕ್ಷವೇ ಕಾರಣ ಎಂದು ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದಾವೂದ್ ನೌಷಾದ್ ಆರೋಪಿಸಿದ್ದಾರೆ.
ಕಳೆದ ವರ್ಷ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರನ್ನು ಎಸ್ಡಿಪಿಐ ನಿಯೋಗವು ಭೇಟಿ ಮಾಡಿ ಬಂಗ್ಲೆಗುಡ್ಡೆಯ ಅಪಾಯಕಾರಿ ಪರಿಸ್ಥಿತಿಯ ಕುರಿತಾಗಿ ಗಮನ ಸೆಳೆದಿತ್ತು. ತಕ್ಷಣ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ತಹಶೀಲ್ದಾರ್ಗೆ ಸೂಚೆನೆ ನೀಡಿದ್ದರು. ಬಳಿಕ ಇಲ್ಲಿನ ಪಿಡಿಒ ಮತ್ತು ತಹಶೀಲ್ದಾರ್ಗೆ ಮನವಿ ಸಲ್ಲಿಸಿತ್ತು. ಆದರೆ ಜಿಲ್ಲಾಧಿಕಾರಿಯ ಆದೇಶಕ್ಕೆ ತಹಶಿಲ್ದಾರರರು ಕ್ಷಿಪ್ರ ಗತಿಯಲ್ಲಿ ಸ್ಪಂದಿಸದ ಕಾರಣ ಇಂತಹ ಅವಘಡ ಸಂಭವಿಸಿದೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈಗಾಗಲೇ ಎರಡು ಕುಟುಂಬಗಳ ಮನೆ ಸಂಪೂರ್ಣ ನೆಲಸಮವಾಗಿದೆ. ಮೂರು ಕುಟುಂಬಗಳ ಮನೆಗಳು ಅರ್ಧ ಭಾಗ ಜರಿದು ಅತಂತ್ರವಾಗಿದೆ. ಈ ಮನೆಮಂದಿಗೆ ಜಿಲ್ಲಾಡಳಿತವೇ ಪುನರ್ವಸತಿ ಕಲ್ಪಿಸಬೇಕು ಹಾಗೂ ತಾತ್ಕಾಲಿಕ ವಾಸಕ್ಕೆ ಸೂಕ್ತ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.