ಉಡುಪಿ: ಜು.9ರಿಂದ 6 ಕೇಂದ್ರಗಳಲ್ಲಿ ಎಸೆಸೆಲ್ಸಿ ಮೌಲ್ಯಮಾಪನ

Update: 2020-07-06 16:29 GMT

ಉಡುಪಿ, ಜು.6: ಕಳೆದ ವಾರ ಯಶಸ್ವಿಯಾಗಿ ಮುಕ್ತಾಯಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ವೌಲ್ಯಮಾಪನ ಕಾರ್ಯ ಜು.9ರಿಂದ ಪ್ರಾರಂಭಗೊಳ್ಳಲಿದ್ದು, ಮುಂದಿನ ಹತ್ತು ದಿನಗಳ ಕಾಲ ನಡೆಯಲಿದೆ. ಉಡುಪಿ ಜಿಲ್ಲೆಯ ಆರು ಕೇಂದ್ರಗಳಲ್ಲಿ ಮೌಲ್ಯಮಾಪನವು ನಡೆಯಲಿದೆ.

ಪರೀಕ್ಷೆಯ ಮೌಲ್ಯಮಾಪನ ಉತ್ತರ ಪತ್ರಿಕೆಗಳು ಜು.8ರಂದು ಮೌಲ್ಯಮಾಪನ ಕೇಂದ್ರಗಳಿಗೆ ಬರಲಿವೆ. ಮೌಲ್ಯಮಾಪನ ಮುಗಿದು ಉತ್ತರ ಪತ್ರಿಕೆಗಳನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸಾಗಿಸುವವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿ ಭಂಗವಾಗದಂತೆ ಎಲ್ಲಾ ವೌಲ್ಯಮಾಪನ ಕೇಂದ್ರದ ಸುತ್ತ 200ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು ಆರು ಮೌಲ್ಯಮಾಪನ ಕೇಂದ್ರಗಳಿವೆ. ಕಡಿಯಾಳಿಯ ಯು.ಕಮಲಾಬಾಯಿ ಪ್ರೌಢ ಶಾಲೆಯಲ್ಲಿ ಕನ್ನಡ ಪತ್ರಿಕೆ, ಆದಿ ಉಡುಪಿ ಪ್ರೌಢ ಶಾಲೆ ಆದಿಉಡುಪಿಯಲ್ಲಿ ಇಂಗ್ಲೀಷ್ ಪತ್ರಿಕೆ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಪತ್ರಿಕೆ, ಸರಕಾರಿ ಪ್ರೌಢ ಶಾಲೆ ವಳಕಾಡು ಇಲ್ಲಿ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆ, ಕ್ರಿಶ್ಚಿಯನ್ ಪ್ರೌಢ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಹಾಗೂ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿವೆ.

ನಿಷೇಧಾಜ್ಞೆಯು ಜು.8ರಿಂದ ಪ್ರಾರಂಭಿಸಿ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಳ್ಳುವವರೆಗೆ (ಜು.18) ದಿನದ 24 ಗಂಟೆಗಳ ಕಾಲವೂ ಜಾರಿಯಲ್ಲಿರುತ್ತದೆ. ಅಲ್ಲದೇ ಕೇಂದ್ರದ ಸುತ್ತಮುತ್ತ ಮೊಬೈಲ್ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News