ಕಾಪು: ಹೊಳೆಗೆ ಹಾರಿ ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

Update: 2020-07-06 17:53 GMT

ಕಾಪು, ಜು.6: ನಾಪತ್ತೆಯಾಗಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಉದ್ಯಾವರ ಪಾಪನಾಶಿನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಉದ್ಯಾವರ ಶಂಭುಕಲ್ಲು ದೇವಸ್ಥಾನ ಬಳಿಯ ನಿವಾಸಿ ಶೇಖರ ಪೂಜಾರಿ (52) ಎಂದು ಗುರುತಿಸಲಾಗಿದೆ. ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಇವರು, ಕಳೆದ ಒಂದು ವರ್ಷಗಳಿಂದ ಉಡುಪಿಯ  ಬ್ಯಾಂಕೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಇವರು ಸರಿಯಾಗಿ ಕೆಲಸಕ್ಕೆ ಹಾಜರಾಗದೆ ಬಳಿಕ ಸ್ವಯಂಪ್ರೇರಿತ ನಿವೃತ್ತಿ ಪಡೆದು ಕಳೆದ ಒಂದು ತಿಂಗಳಿನಿಂದ ಮನೆಯಲ್ಲಿದ್ದರು.

ಜು.4ರಂದು ಮನೆಯಿಂದ ಕಟಪಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು. ಜು.6ರಂದು ಇವರ ಮೃತದೇಹ ಉದ್ಯಾವರ ಉಪ್ಪುಗುಡ್ಡೆಯ ಹೊಳೆಯಲ್ಲಿ ಪತ್ತೆಯಾಗಿದೆ. ಇವರು ವೈಯಕ್ತಿಕ ಕಾರಣಕ್ಕೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News