ಕಡಬ ತಾಲೂಕು ವ್ಯಾಪ್ತಿಯಲ್ಲಿ ಎರಡು ಕೊರೋನ ಪ್ರಕರಣ ಪತ್ತೆ
ಪುತ್ತೂರು, ಜು.8: ಕಡಬ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಎರಡು ಕೊರೋನ ಪ್ರಕರಣಗಳು ಪತ್ತೆಯಾಗಿವೆ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೂಲತಃ ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿಯಾಗಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 35 ವರ್ಷ ಪ್ರಾಯದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಕೊರೋನ ಸೋಂಕಿನಿಂದ ಬುಧವಾರ ಮೃತಪಟ್ಟ ಕೂರ್ನಡ್ಕ ನಿವಾಸಿ ಮಹಿಳೆಯ ಸಂಬಂಧಿೆ, ಆಲಂಕಾರು ನಿವಾಸಿ 42 ವರ್ಷ ವಯಸ್ಸಿನ ಮಹಿಳೆಯೊಬ್ಬರಲ್ಲಿ ಬುಧವಾರ ಕೊರೋನ ಸೋಂಕು ದೃಢಪಟ್ಟಿದೆ. ಇವರು ನಾಲ್ಕು ದಿನಗಳ ಹಿಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಾಗಿರುವ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಇದೀಗ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೋನ ದೃಢಪಟ್ಟಿದೆ.
ಮಹಾಮಾರಿಗೆ ಪುತ್ತೂರಿನಲ್ಲಿ ಪ್ರಥಮ ಬಲಿ
ಕೊರೋನ ವೈರಸ್ ಸೋಂಕಿಗೆ ಪುತ್ತೂರಿನಲ್ಲಿ ಪ್ರಥಮ ಬಲಿಯಾಗಿದ್ದು, ಕೂರ್ನಡ್ಕದ ನಿವಾಸಿ 32 ವರ್ಷದ ಬಾಣಂತಿ ಗೃಹಿಣಿ ಬುಧವಾರ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ವಾರ ಈ ಮಹಿಳೆಗೆ ಕೊರೋನಾ ಸೋಂಕು ತಗಲಿತ್ತು. ಇದರ ಪರಿಣಾಮ ಈಕೆಯ ಹಸಿಗೂಸಿಗೂ ಸೋಂಕು ತಗಲಿತ್ತು. ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಮಹಿಳೆಯ ಅಂತ್ಯಕ್ರಿಯೆಗಳು ಬುಧವಾರ ಅಪರಾಹ್ನ ಕೂರ್ನಡ್ಕ ಮಸೀದಿಗೊಳಪಟ್ಟ ಬೆದ್ರಾಳ ದಫನ ಭೂಮಿಯಲ್ಲಿ ಕೋವಿಡ್ ಸುರಕ್ಷಾ ಕ್ರಮದೊಂದಿಗೆ ನೆರವೇರಲಿದೆ.