ಮೂಡುಬಿದಿರೆ ಪುರಸಭೆಯಿಂದ ಪೇಟೆಯಲ್ಲಿ ಸ್ಯಾನಿಟೈಸಿಂಗ್
Update: 2020-07-08 16:21 GMT
ಮೂಡುಬಿದಿರೆ: ಕೊರೋನ ನಿಯಂತ್ರಣದ ಹಿನ್ನಲೆಯಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಸ್ಯಾನಿಟೈಸಿಂಗ್ ಮಾಡುವಂತೆ ಮಂಗಳವಾರ ನಡೆದ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸೂಚಿಸಿದಂತೆ ಪುರಸಭೆಯ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಹಯೋಗದಲ್ಲಿ ಪೇಟೆಯ ಮಾರ್ಕೆಟ್, ಆಳ್ವಾಸ್ ರಸ್ತೆ, ಬಸ್ ನಿಲ್ದಾಣ, ಮೀನು ಮಾರ್ಕೆಟ್ ಮತ್ತು ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಸ್ಯಾನಿಟೈಸಿಂಗ್ ನಡೆಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಪುರಸಭಾ ಮುಖ್ಯಾಧಿಕಾರಿ ಇಂದು ಅವರು ಕೊರೋನ ನಿಯಂತ್ರಣದ ಹಿನ್ನಲೆಯಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಎರಡು ದಿನಕ್ಕೊಮ್ಮೆ ಸ್ಯಾನಿಟೈಸಿಂಗ್ ಮಾಡಲಾಗಿದೆ. ಇದೀಗ ಮತ್ತೊಮ್ಮೆ ಪೇಟೆಯ ಎಲ್ಲಾ ಕಡೆಗಳಲ್ಲಿ, ಕಛೇರಿಗಳಿಗೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ ಎಂದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ, ಆರೋಗ್ಯ ಇಲಾಖೆಯ ನಾಗರಾಜ್ ಮತ್ತು ಪುರಸಭಾ ಸಿಬಂಧಿ ಸುದೀಶ್ ಹೆಗ್ಡೆ ಈ ಸಂದರ್ಭದಲ್ಲಿದ್ದರು.