ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ಹಲ್ಲೆ: ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ, ಜು.9: ಕರ್ತವ್ಯನಿರತ ಆಶಾ ಕಾರ್ಯಕರ್ತೆಗೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟು ಎಂಬಲ್ಲಿ ನಡೆದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಮಮತಾ ಗಟ್ಟಿ ಎಂಬವರಿಗೆ ಇಲ್ಲಿಯ ಮಜಲು ನಿವಾಸಿ ಕಾಂತಪ್ಪ ಪೂಜಾರಿ ಎಂಬಾತ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಮಮತಾ ಕರ್ತವ್ಯದಲ್ಲಿರುವಾಗ ದೊಣ್ಣೆಯಿಂದ ಏಕಾ ಏಕಿ ಹಲ್ಲೆ ನಡೆಸಿದ್ದು ತಲೆಗೆ, ಕೈಗೆ ಏಟಾಗಿದೆ. ತಕ್ಷಣ ಅವರನ್ನು ವಾಮದಪದವು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮೇಶ್ ಅಡ್ಯಂತಾಯ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.