ಶಂಕರನಾರಾಯಣ: ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2020-07-09 15:35 GMT
ಶಂಕರನಾರಾಯಣ, ಜು.9: ಕೂಲಿಕಾರ್ಮಿಕರೊಬ್ಬರು ತಮ್ಮ ಮನೆಯ ಸಮೀಪದ ಹೊಳೆಗೆ ಕೈಕಾಲು ತೊಳೆಯಲೆಂದು ತೆರಳಿದ್ದಾಗ, ಕಲ್ಲುಜಾರಿ ಅಕಸ್ಮಿಕವಾಗಿ ಹೊಳೆಯ ನೀರಿಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಮೃತರನ್ನು ಹೊಸಂಗಡಿಕಂಠಗದ್ದೆ ನಿವಾಸಿ ಕೂಲಿಕಾರ್ಮಿಕ ವಿಠಲ ಗೊಲ್ಲ (48) ಎಂದು ಗುರುತಿಸಲಾಗಿದೆ. ಅವರು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಊಟ ಮಾಡಲೆಂದು ಮನೆಯ ಸಮೀಪದ ಹೊಳೆಗೆ ಕೈಕಾಲು ತೊಳೆಯಲು ಹೋಗಿದ್ದಾಗ, ಕಾಲಿಟ್ಟ ಕಲ್ಲು ಅಕಸ್ಮಿಕ ಜಾರಿ ಹೊಳೆಯ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ಆದರೆ ನಿನ್ನೆಯ ಸಂಜೆಯವರೆಗೆ ಅವರ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ವಿಠಲ ಅವರ ಮೃತದೇಹ ಇಂದು ಅಪರಾಹ್ನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ವಿಠಲ ಗೊಲ್ಲ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.