ಉಡುಪಿ: ಭಾರೀ ಗಾಳಿ-ಮಳೆ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ

Update: 2020-07-09 16:51 GMT

ಉಡುಪಿ, ಜು.9: ಮುಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರಿನ ಹವಾಮಾನ ಕೇಂದ್ರಗಳು ಮುನ್ಸೂಚನೆ ನೀಡಿವೆ.

ಕರ್ನಾಟಕ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಬಿರುಗಾಳಿ, ಸಿಡಿಲು- ಗುಡುಗಿನೊಂದಿಗೆ ಭಾರೀ ಮಳೆ ಸುರಿಯಲಿದ್ದು, 115ಮಿ.ಮೀ.ಗೂ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ ಮೂರು ದಿನಗಳಲ್ಲೂ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ನಾಳೆ ಸಮುದ್ರದಲ್ಲಿ ಭಾರೀ ತೆರೆಗಳು ಏಳುವ ಸಂಭವವಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 36ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 33 ಮಿ.ಮೀ., ಕುಂದಾಪುರದಲ್ಲಿ 38 ಹಾಗೂ ಕಾರ್ಕಳದಲ್ಲಿ 38.5ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಗೋವಿಂದ ನಾಯ್ಕಾ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು, 75ಸಾವಿರ ರೂ.ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News