ಕೃಷಿ ಚಟುವಟಿಕೆ ಪ್ರತಿಷ್ಠೆಯ ಕಾಯಕ: ರಘುಪತಿ ಭಟ್

Update: 2020-07-15 12:00 GMT

ಉಡುಪಿ, ಜು.15: ಕೃಷಿ ಮಾಡುವುದನ್ನು ನಮ್ಮ ಸ್ವಪ್ರತಿಷ್ಠೆಯ ಕಾಯಕವೆಂದು ಭಾವಿಸಿ ಕೃಷಿ ಭೂಮಿಯನ್ನು ಹಡಿಲು ಬಿಡದೆ ಅದರಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ನಿಟ್ಟೂರು ಪ್ರೌಢ ಶಾಲಾ ಸುವರ್ಣ ಪರ್ವದ ಅಂಗವಾಗಿ ಜು.15ರಂದು ಕರಂಬಳ್ಳಿಯ ಸಂಜೀವ ಶೆಟ್ಟಿ ಮಾರ್ಗದ ಬಳಿ ಆಯೋಜಿಸಲಾದ ಹಡಿಲು ಭೂಮಿ ಕೃಷಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶ ಸದೃಢವಾಗಿರಬೇಕಾದರೆ ಕೃಷಿ ಕ್ಷೇತ್ರ ಬಲಿಷ್ಠವಾಗಿರಬೇಕು. ದೇಶದ ಆರ್ಥಿಕತೆಯಲ್ಲಿ ಆಹಾರ ಉತ್ಪಾದನೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರ ಮೂಲ ಕೃಷಿ. ಕೃಷಿಭೂಮಿಯನ್ನು ಬಂಜರಾಗಲು ಬಿಡಬಾರದು. ಇತ್ತೀಚಿನ ದಿನಗಳಲ್ಲಿ ಜನ ಕೃಷಿಯತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸುಮಾರು 8 ಎಕ್ರೆ ಪ್ರದೇಶದಲ್ಲಿ ಇಂದು ನಾಟಿ ಮಾಡಲಾಯಿತು. ಸ್ಥಳೀಯರೊಂದಿಗೆ ಶಾಸಕರು ನೇಜಿ ನೆಡುವ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದೇ ರೀತಿ ಶಾಸಕರ ಮಕ್ಕಳಾದ ರಾಹುಲ್, ರೆಯಾನ್ಶ್ ಮತ್ತು ಸಹೋದರರಾದ ರಮೇಶ್ ಭಾರಿತ್ತಾಯ ಹಾಗೂ ಜಯಶ್ರೀ ಬಾರಿತ್ತಾಯ ಜೊತೆಗಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಸುವರ್ಣ ಪರ್ವದ ಅಧ್ಯಕ್ಷ ಯೋಗೀಶ್ ಚಂದ್ರಾಧರ್, ಹಿರಿಯ ರಾದ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News