ಉಳ್ಳಾಲ: ಭಾರೀ ಮಳೆಗೆ ಜರಿದ ಗುಡ್ಡ; ಬಾಡಿಗೆ ಮನೆಗಳ ಕಟ್ಟಡ ಅಪಾಯದಲ್ಲಿ
Update: 2020-07-16 13:20 GMT
ಉಳ್ಳಾಲ: ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳೇಕೋಟೆ ಬಳಿ ಗುಡ್ಡ ಜರಿದು ಬಿದ್ದ ಪರಿಣಾಮ ಬಾಡಿಗೆಗೆ ನೀಡಲಾಗಿರುವ ಅಬ್ದುಲ್ಲಾ ಎಂಬವರ ಮಾಲಕತ್ವದ ಕಟ್ಟಡ ಅಪಾಯದಂಚಿನಲ್ಲಿದ್ದು, ಈ ಕಟ್ಟಡದಲ್ಲಿ ವಾಸವಾಗಿದ್ದ ಮೂರು ಕುಟುಂಬಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಗುಡ್ಡ ಜರಿದ ಪರಿಣಾಮ ಬಾಡಿಗೆ ಮನೆ ಬಿರುಕು ಬಿಟ್ಟು ಅಪಾಯದಲ್ಲಿದೆ. ವಿದ್ಯುತ್ ಕಂಬ ಧರೆಗುರುಳಿದೆ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಘಟನ ಸ್ಥಳಕ್ಕೆ ಉಳ್ಳಾಲ ನಗರ ಸಭಾ ಪೌರಾಯುಕ್ತ ರಾಯಪ್ಪ, ಗ್ರಾಮಕರಣಿಕ ಪ್ರಮೋದ್, ಸಹಾಯಕ ನವನೀತ್, ಕೌನ್ಸಿಲರ್ ಝರೀನ ರವೂಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದು ವರ್ಷದ ಹಿಂದೆ ಈ ರಸ್ತೆ ಕುಸಿದು ಬಿದ್ದು ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳ, ಶಾಸಕ ಖಾದರ್ ಅವರ ಗಮನ ಸೆಳೆದಿದ್ದೇವೆ. ಶೀಘ್ರ ದುರಸ್ತಿ ಮಾಡುವುದಾಗಿ ಭರವಸೆ ಮಾತ್ರ ಸಿಕ್ಕಿದೆ.
ಝರೀನ ರವೂಫ್, ಕೌನ್ಸಿಲರ್